ಯುವಜನರನ್ನು ಆಧ್ಯಾತ್ಮಿಕ ಜಗತ್ತಿಗೆ ಕೊಂಡೊಯ್ದ ಗೊಸ್ಪೆಲ್ ಗಾಲಾ
ಉಡುಪಿ: ಆಧ್ಯಾತ್ಮಿಕ ವಿಚಾರದಿಂದ ದೂರ ಹೋಗುತ್ತಿರುವ ಯುವಜನರನ್ನು ಧಾರ್ಮಿಕ ವಿಚಾರಗಳತ್ತ ಸೆಳೆಯುವ ನಿಟ್ಟಿನಲ್ಲಿ ಕಲ್ಯಾಣಪುರ ವಲಯದ ಕ್ರೈಸ್ತ ಯುವಸಮುದಾಯಕ್ಕೆ ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಭಾರತೀಯ ಕಥೊಲಿಕ ಯುವ ಸಂಚಾಲನ ಇದರ ನೇತೃತ್ವದಲ್ಲಿ ಒಂದು ದಿನದ ಗೊಸ್ಪೆಲ್ ಗಾಲಾ ಅಥವಾ ಸುವಾರ್ತೆಯ ಸಂಭ್ರಮ ಎಂಬ ವಿಶಿಷ್ಠ ಕಾರ್ಯಕ್ರಮವನ್ನು ಚರ್ಚಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬೈಬಲ್ ಗೆ ಮಾಲಾರ್ಪಣೆ ಮಾಡಿ ದೀಪ ಬೆಳಗುವುದರ ಮೂಲಕ ಕಲ್ಯಾಣಪುರ ವಲಯ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ ಚಾಲನೆ ನೀಡಿದರು.
ಬಳಿಕ ಅವರು ಮಾತನಾಡಿ, ಪ್ರೀತಿ ಮತ್ತು ಕ್ಷಮೆಯ ಗುಣಗಳ ಮೂಲಕ ಓರ್ವ ಉತ್ತಮ ನಾಯಕ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿದೆ. ಯೇಸು ಸ್ವಾಮಿಯು ತನ್ನ ಜೀವನದಲ್ಲಿ ಕ್ಷಮೆ ಮತ್ತು ಪ್ರೀತಿಯ ಮೂಲಕ ಇಡೀ ವಿಶ್ವದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಮಾಡಿ ತೋರಿಸಿರುವುದು ನಮಗೆಲ್ಲರಿಗೂ ಮಾದರಿಯಾಗಿದೆ ಎಂದರು.
ತೊಟ್ಟಂ ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಡೆನಿಸ್ ಡೆಸಾ ಮಾತನಾಡಿ, 2025 ಯೇಸು ಸ್ವಾಮಿಯ ಹುಟ್ಟಿನ ಜುಬಿಲಿ ಆಚರಣೆಯಿದ್ದು ಇದಕ್ಕೆ ಪೂರಕವಾಗಿ ಈ ವರ್ಷವನ್ನು ಪ್ರಾರ್ಥನೆಯ ವರ್ಷವಾಗಿ ಘೋಷಿಸಲಾಗಿದೆ.
ಯುವ ಜನರು ಹೇಗೆ ಆಟೋಟ, ಸಾಂಸ್ಕೃತಿಕ ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೋ ಅದೇ ರೀತಿ ಆಧ್ಯಾತ್ಮಿಕ ವಿಚಾರಗಳಿಗೂ ಕೂಡ ಅವರುಗಳು ಆಸಕ್ತಿ ತೋರಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಲ್ಯಾಣಪುರ ವಲಯ 9 ಚರ್ಚುಗಳ ಸುಮಾರು 175 ಯುವಜನರು ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ತೊಟ್ಟಮ್ ಸಂತ ಅನ್ನಮ್ಮ ಕಾನ್ವೆಂಟ್ ನ ಮುಖ್ಯಸ್ಥರಾದ ಸಿಸ್ಟರ್ ಸುಷ್ಮಾ, ಉಡುಪಿ ಧರ್ಮಪ್ರಾಂತ್ಯದ ಐಸಿವೈಎಮ್ ಅಧ್ಯಕ್ಷರಾದ ಗೊಡ್ವಿನ್ ಮಸ್ಕರೇನ್ಹಸ್, ವಲಯ ಅಧ್ಯಕ್ಷರಾದ ಲೊಯ್ಡ್ ಕರ್ನೆಲಿಯೊ, ತೊಟ್ಟಂ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸುನಿಲ್ ಫೆರ್ನಾಂಡಿಸ್, ಐಸಿವೈಎಮ್ ಸಚೇತಕರಾದ ಲೆಸ್ಲಿ ಆರೋಝಾ, ಆಲಿಸ್ ಮಿನೇಜಸ್, ತೊಟ್ಟಂ ಐಸಿವೈಎಮ್ ಅಧ್ಯಕ್ಷರಾದ ಸ್ಯಾಮುವೆಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಉಡುಪಿ ಧರ್ಮಪ್ರಾಂತ್ಯದ ಯುವ ನಿರ್ದೇಶಕ ವಂದನೀಯ ಸ್ಟೀವನ್ ಡಿಸೋಜಾ, ಕಲ್ಯಾಣಪುರ ವಲಯ ಯುವ ನಿರ್ದೇಶಕ ವಂದನೀಯ ಸುನೀಲ್ ಡಿಸಿಲ್ವಾ ಉಪಸ್ಥಿತರಿದ್ದರು.