ಬರ್ತಿದೆ ಸಿಎಂ ಸಿದ್ದು ಬಯೋಪಿಕ್ "ಲೀಡರ್ ರಾಮಯ್ಯ"
ಬೆಂಗಳೂರು: ಸಿದ್ದರಾಮಯ್ಯ ಜೀವನಾಧಾರಿತ ಕತೆ "ಲೀಡರ್ ರಾಮಯ್ಯ" ಎಂಬ ಚಿತ್ರವನ್ನು ಸತ್ಯರತ್ನಂ ನಿರ್ದೇಶಿಸಲಿದ್ದು, ಇದೀಗ ಚಿತ್ರದಲ್ಲಿ ಸಿಎಂ ಸಿದ್ದರಾಮಯ್ಯನವರ ಬಾಲ್ಯದ ಪಾತ್ರಕ್ಕೆ ಮಾಸ್ಟರ್ ಆಕಾಶ್ ಆಯ್ಕೆಯಾಗಿದ್ದಾರೆ.
ಸತ್ಯರತ್ನಂ ನಿರ್ದೇಶನದ ಈ ಬಯೋಪಿಕ್ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮುಹೂರ್ತ ಶೀಘ್ರದಲ್ಲೇ ನಡೆಯಲಿದೆ. 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಮಾಸ್ಟರ್ ಆಕಾಶ್ ಸಿದ್ದರಾಮಯ್ಯ ಅವರ ಬಾಲ್ಯದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.
ಇಂದು ಆಕಾಶ್ ಹುಟ್ಟುಹಬ್ಬದ ಪ್ರಯುಕ್ತ ಹೊಸ ಚಿತ್ರಗಳ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಆಕಾಶ್, ‘ಸಿನಿಮಾ ಬಗ್ಗೆ ಚಿಕ್ಕಂದಿನಿಂದಲೂ ತುಂಬಾ ಆಸಕ್ತಿ ಇತ್ತು. ಅದಕ್ಕೆ ಅಪ್ಪ – ಅಮ್ಮನಿಂದ ಸಹಕಾರ ಸಿಕ್ಕಿದೆ. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಮಾಸ್ಟರ್ ಬಳಿ ಸ್ಟಂಟ್ಸ್, ನಿರ್ದೇಶಕ ಲಕ್ಕಿ ಶಂಕರ್ ಸರ್ ಬಳಿ ಆಕ್ಟಿಂಗ್ ಕಲಿಯುತ್ತಿದ್ದೇನೆ. ಹಾಗೆಯೇ ಡಾನ್ಸ್, ವರ್ಕೌಟ್ ಸೇರಿ ಸಿನಿಮಾಗೆ ಬೇಕಾದ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುತ್ತಿದ್ದೇನೆ. ಈ ವರ್ಷದ ಹುಟ್ಟುಹಬ್ಬದಂದು ನಾಲ್ಕು ಸಿನಿಮಾಗಳು ಘೋಷಣೆಯಾಗಿರುವುದು ಖುಷಿ ನೀಡಿದೆ’ ಎಂದು ಹೇಳಿದ್ದಾರೆ.