ಅಬು ಧಾಬಿಯ ಮೊದಲ ಹಿಂದೂ ದೇವಾಲಯಕ್ಕೆ ಅಕ್ಷಯ್ ಕುಮಾರ್ ಭೇಟಿ
ಅಬು ಧಾಬಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಯಾಗಿ ಕೆಲವೇ ದಿನಗಳ ಕಳೆದಿವೆ. ಅದರ ಬೆನ್ನಲ್ಲೇ ಇನ್ನೊಂದು ಐತಿಹಾಸಿಕ ಘಟನೆ ನಡೆದಿದೆ. ಅಬು ಧಾಬಿಯಲ್ಲಿ ಮೊದಲ ಹಿಂದೂ ದೇವಾಲಯ ನಿರ್ಮಾಣ ಆಗಿದೆ. ಇದನ್ನು ಬುಧವಾರ (ಫೆ. 14) ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದಾರೆ.
ನಟ ಅಕ್ಷಯ್ ಕುಮಾರ್ ಅವರು ಈ ದೇವಾಲಯಕ್ಕೆ ಅತಿಥಿಯಾಗಿ ತೆರಳಿದ್ದಾರೆ. ಯುನೈಟೆಡ್ ಅರಬ್ ಎಮಿರೈಟ್ಸ್ನ ರಾಜಧಾನಿಯಾದ ಅಬು ಧಾಬಿಯಲ್ಲಿ ಮೊದಲ ಬಾರಿಗೆ ಹಿಂದೂ ದೇವಾಲಯ ನಿರ್ಮಾಣ ಆಗಿದ್ದಕ್ಕೆ ಅಕ್ಷಯ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಈ ದೇವಸ್ಥಾನದ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ವೈರಲ್ ಆಗಿದೆ.
‘ಅಬು ಧಾಬಿಯ ಸ್ವಾಮಿನಾರಾಯಣ ದೇವಸ್ಥಾನದ ಉದ್ಘಾಟನೆಯಲ್ಲಿ ಭಾಗಿಯಾಗಿದ್ದಕ್ಕೆ ನಾನು ಧನ್ಯ. ಎಂಥ ಐತಿಹಾಸಿಕ ಕ್ಷಣ’ ಎಂದು ಅಕ್ಷಯ್ ಕುಮಾರ್ ಅವರು ಬರೆದುಕೊಂಡಿದ್ದಾರೆ. ನಾಲ್ಕೂವರೆ ಲಕ್ಷಕ್ಕೂ ಅಧಿಕ ಜನರು ಫೋಟೋವನ್ನು ಲೈಕ್ ಮಾಡಿದ್ದಾರೆ. ಈ ಫೋಟೋದ ಗಾಜಿನಲ್ಲಿ ಅಕ್ಷಯ್ ಕುಮಾರ್ ಅವರ ಪ್ರತಿಬಿಂಬ ಕಾಣಿಸಿದೆ. ಅದನ್ನು ನೋಡಿ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಅಬು ಧಾಬಿಗೆ ಅಕ್ಷಯ್ ಕುಮಾರ್ ಭೇಟಿ ನೀಡಿದ ಸಂದರ್ಭದ ವಿಡಿಯೋ ಕೂಡ ವೈರಲ್ ಆಗಿವೆ.
2018 ರಲ್ಲಿ ಪ್ರಧಾನಿ ಮೋದಿಯವರು UAE ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅಬುಧಾಬಿಯಲ್ಲಿ BAPS ಹಿಂದೂ ಮಂದಿರವನ್ನು ಅಧಿಕೃತವಾಗಿ ಘೋಷಿಸಲಾಯಿತು. ಇನ್ನು ದೇವಾಲಯದ ರಚನೆಯ ಬಗ್ಗೆ ಹೇಳುವುದಾದರೆ ದೇವಾಲಯವು ಏಳು ಶಿಖರಗಳನ್ನು ಒಳಗೊಂಡಿದೆ. ಪ್ರತಿಯೊಂದೂ UAE ಯ ಎಮಿರೇಟ್ ಅನ್ನು ಪ್ರತಿನಿಧಿಸುತ್ತದೆ ಮತ್ತು ಭಾರತದ ಗಂಗಾ ನದಿಯ ಘಾಟ್ಗಳನ್ನು ಹೋಲುವ ಆಂಫಿಥಿಯೇಟರ್, ಪುನರಾವರ್ತಿತ ಮರಳು ದಿಬ್ಬ ಮತ್ತು ಭಾರತದಲ್ಲಿ ಗಂಗಾ ಮತ್ತು ಯಮುನಾ ನದಿಗಳನ್ನು ಪ್ರತಿನಿಧಿಸುವ ಅಂಶಗಳನ್ನು ಒಳಗೊಂಡಿದೆ.