For the best experience, open
https://m.newskannada.com
on your mobile browser.
Advertisement

ರಾಜೀವನಗರ ಮತಗಟ್ಟೆಯಲ್ಲಿ ನಕಲಿ ಮತದಾನದ ಆರೋಪ

ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 80ನೇ ಬಡಗಬೆಟ್ಟು ಗ್ರಾಪಂನ ರಾಜೀವ ನಗರ ಸಂಯುಕ್ತ ಪ್ರೌಢಶಾಲೆಯ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಬೇರೆ ವ್ಯಕ್ತಿ ಆಗಮಿಸಿ ಮತದಾನ ಮಾಡಿದ್ದು, ಇಲ್ಲಿ ನಕಲಿ ಮತದಾನ ನಡೆದಿರುವ ಆರೋಪಗಳು ಕೇಳಿಬಂದಿವೆ.
05:19 PM Apr 26, 2024 IST | Chaitra Kulal
ರಾಜೀವನಗರ ಮತಗಟ್ಟೆಯಲ್ಲಿ ನಕಲಿ ಮತದಾನದ ಆರೋಪ

ಉಡುಪಿ: ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 80ನೇ ಬಡಗಬೆಟ್ಟು ಗ್ರಾಪಂನ ರಾಜೀವ ನಗರ ಸಂಯುಕ್ತ ಪ್ರೌಢಶಾಲೆಯ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಬೇರೆ ವ್ಯಕ್ತಿ ಆಗಮಿಸಿ ಮತದಾನ ಮಾಡಿದ್ದು, ಇಲ್ಲಿ ನಕಲಿ ಮತದಾನ ನಡೆದಿರುವ ಆರೋಪಗಳು ಕೇಳಿಬಂದಿವೆ.

Advertisement

ಅರ್ಬಿಯ ಕೃಷ್ಣ ನಾಯಕ್ ಎಂಬವರು ಮತದಾನ ಮಾಡಲು ಮತಗಟ್ಟೆಗೆ ಆಗಮಿಸಿದಾಗ ತಮ್ಮ ಹೆಸರಿನಲ್ಲಿ ಆಗಲೇ ಮತದಾನ ಮಾಡಿರುವುದಾಗಿ ಮತ ಗಟ್ಟೆ ಅಧಿಕಾರಿಗಳು ತಿಳಿಸಿದರು. ಆದರೆ ನಾನು ಮತದಾನ ಮಾಡಿಲ್ಲ ಎಂದು ಕೃಷ್ಣ ನಾಯಕ್ ವಾದ ಮಂಡಿಸಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು.

ಪಕ್ಷದ ಏಜೆಂಟ್ ಗಳು ಈ ವಿಚಾರದಲ್ಲಿ ಸಂಬಂಧಪಟ್ಟ ಮತಗಟ್ಟೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಕೃಷ್ಣ ನಾಯಕ್ ಹೆಸರಿನಲ್ಲಿ ಯಾರೋ ನಕಲಿ ಮತದಾನ ಮಾಡಿದ್ದಾರೆಂದು ಆರೋಪಿಸಲಾಯಿತು. ಆದುದರಿಂದ ಈ ಮತಗಟ್ಟೆಯಲ್ಲಿ ಮರು ಮತದಾನ ಆಗಬೇಕು ಎಂದು ಅವರು ಒತ್ತಾಯಿಸಿದರು.

Advertisement

ಮುಖ ನೋಡದೆ ಒಬ್ಬರ ಹೆಸರಿನಲ್ಲಿ ಇನ್ನೊಬ್ಬರಿಗೆ ಮತದಾನ ಮಾಡಲು ಹೇಗೆ ಅವಕಾಶ ಮಾಡಿಕೊಟ್ಟಿದ್ದೀರಿ ಎಂದು ಅವರು ಅಧಿಕಾರಿಯನ್ನು ಪ್ರಶ್ನಿಸಿದರು. ಈ ಕುರಿತು ತಮ್ಮಿಂದ ಆಗಿರುವ ತಪ್ಪನ್ನು ಅಧಿಕಾರಿಗಳು ಒಪ್ಪಿಕೊಂಡರು. ಈ ಬಗ್ಗೆ ಸರಿಪಡಿಸುವುದಾಗಿ ಭರವಸೆ ನೀಡಿದರು.

ಬಳಿಕ ಸ್ಥಳಕ್ಕೆ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್, ಸೆಕ್ಟರ್ ಆಫೀಸರ್ ನಿಧೀಶ್ ಆಗಮಿಸಿ ಮಾತುಕತೆ ನಡೆಸಿದರು. ಕೃಷ್ಣ ನಾಯಕ್ ಹೆಸರಿನಲ್ಲಿ ಮತದಾನ ಮಾಡಿರುವವರನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಯ ಪರಿಶೀಲನೆ ನಡೆಸಲಾಗುತ್ತಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಅವರನ್ನು ಸಂಪರ್ಕಿಸಿದಾಗ, ಇಲ್ಲಿ ನಕಲಿ ಮತದಾನ ಆಗಿಲ್ಲ. ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳಿರುವುದರಿಂದ ಅದಲು ಬದಲು ಆಗಿರಬಹುದು. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ಎಲ್ಲರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡಲಿದ್ದಾರೆ ಎಂದರು.

ಮತದಾನ ಮಾಡಲು ಬರುವಾಗ ಸ್ವಲ್ಪ ತಡವಾಗಿತ್ತು. ಆದರೂ ಮತದಾನ ಮಾಡಲು ಒಳಗೆ ಹೋಗಿ ಸ್ಲಿಪ್ ಕೊಟ್ಟು, ಎಪಿಕ್ ಕಾರ್ಡ್ ತೋರಿಸಿದೆ. ಆಗ ಅಧಿಕಾರಿಗಳು ಈ ಹೆಸರಿನಲ್ಲಿ ಮತದಾನ ಮಾಡಿ ಆಗಿದೆ ಎಂದು ಹೇಳಿದರು.

ಅದಕ್ಕೆ ನಾನು ಮತದಾನ ಮಾಡಿಲ್ಲ ಎಂದು ತಿಳಿಸಿದೆ. ಅದಕ್ಕೆ ಟೆಂಡರ್ ಮತ ಹಾಕುವಂತೆ ಅಧಿಕಾರಿಗಳು ತಿಳಿಸಿದರು. ನನ್ನ ಹೆಸರಿನಲ್ಲಿ ಯಾರು ಹಾಕಿದ್ದಾರೆ ಎಂದು ಗೊತ್ತಿಲ್ಲ ಎಂದು ಮತದಾರ ಕೃಷ್ಣ ನಾಯಕ್ ಹೇಳಿದರು.

Advertisement
Tags :
Advertisement