ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಘೋಷಣೆ: ಸಿಎಂಗೆ ಕೆಯುಡಬ್ಲ್ಯುಜೆ ವತಿಯಿಂದ ಅಭಿನಂದನೆ
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನದ ಬೇಡಿಕೆಯಾಗಿದ್ದ ಗ್ರಾಮೀಣ ಪತ್ರಕರ್ತರರಿಗೆ ಬಸ್ ಪಾಸ್ ನೀಡುವ ಸಂಬಂಧ ಇತ್ತಿಚೆಗೆ ದಾವಣಗೆರೆಯಲ್ಲಿ ನಡೆದ 38ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾತು ಕೊಟ್ಟಂತೆ ಈ ವರ್ಷದ ಬಜೆಟ್ ನಲ್ಲಿ ಅದನ್ನು ಘೋಷಣೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಗುರುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯರು ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಗೆ ತೆರಳಿ ಅಭಿನಂದನೆ ಪತ್ರ ಸಲ್ಲಿಸಿದರು.
ಸಂಘದ ನಿಯೋಗದೊಂದಿಗೆ ಮುಖ್ಯಮಂತ್ರಿಗಳು ಮನದುಂಬಿ ಮಾತನಾಡಿದರು. ರಾಜ್ಯದ ಸಾವಿರಾರು ಗ್ರಾಮೀಣ ಪತ್ರಕರ್ತರಿಗೆ ನಿಮ್ಮ ಘೋಷಣೆಯಿಂದ ತುಂಬ ಅನುಕುಲ ಆಗಲಿದ್ದು, ನಿಮ್ಮ ಈ ಉದಾರತೆಗೆ ಪತ್ರಕರ್ತರ ಸಂಘ ಸದಾ ಚಿರರುಣಿಯಾಗಿರುತ್ತದೆ ಎಂದು ತಗಡೂರು ಹೇಳಿದರು.
ನಿಯೋಗದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಪುಂಡಲಿಕ್ ಬಾಳೋಜಿ, ಭವಾನಿಸಿಂಗ್ ಠಾಕೂರ್, ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಖಜಾಂಚಿ ವಾಸುದೇವ ಹೊಳ್ಳ, ಹಾಸನ ಜಿಲ್ಲಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಮದನಗೌಡ, ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ವಿಜಯನಗರ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ರಾಯಚೂರಿನ ಗುರುನಾಥ್, ಮಂಗಳೂರು ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ ಹಿಂದಾಜಿ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟಾ, ಖಜಾಂಚಿ ಪುಷ್ಪರಾಜ್ ಮುಂತಾದವರು ನಿಯೋಗದಲ್ಲಿದ್ದರು.