ಕೇರಳದಲ್ಲಿ ಬೆಗ್ಗಿಂಗ್, ದೆಹಲಿಯಲ್ಲಿ ಹಗ್ಗಿಂಗ್, ಕರ್ನಾಟಕದಲ್ಲಿ ಥಗ್ಗಿಂಗ್ ಎಂದ ಸ್ಮೃತಿ ಇರಾನಿ
ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಯುತ್ತಿದ್ದು, ಪ್ರತಿಪಕ್ಷಗಳ ಸ್ಥಿತಿಯು ವಿಚಿತ್ರ ರೂಪ ತಾಳಿದ್ದು, ಕೇರಳದಲ್ಲಿ ಬೆಗ್ಗಿಂಗ್, ದೆಹಲಿಯಲ್ಲಿ ಹಗ್ಗಿಂಗ್ ಹಾಗೂ ಕರ್ನಾಟಕದಲ್ಲಿ ಥಗ್ಗಿಂಗ್” ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು.
ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ಪ್ರತಿಪಕ್ಷಗಳು ತುಂಬ ವಿಚಿತ್ರ ಪರಿಸ್ಥಿತಿಯಲ್ಲಿ ಸಿಲುಕಿ ನರಳಾಡುತ್ತಿವೆ. ದೆಹಲಿಯಲ್ಲಿ ಪ್ರತಿಪಕ್ಷಗಳು ಪರಸ್ಪರ ತಬ್ಬಿಕೊಂಡು ಚುನಾವಣೆ ಎದುರಿಸುತ್ತಿವೆ. ಆದರೆ, ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿ ವಿರುದ್ಧ ತಮ್ಮದೇ ಮೈತ್ರಿಕೂಟದ ಸಿಪಿಎಂ ಅಭ್ಯರ್ಥಿ ಕಣಕ್ಕಿಳಿದಿದ್ದಾರೆ.
ಹಾಗಾಗಿ, ಇಲ್ಲಿ ಬೆಗ್ಗಿಂಗ್ ನಡೆಯುತ್ತಿದೆ. ಇನ್ನು ಕರ್ನಾಟಕದಲ್ಲಿ ಸಚಿವರ ಮಕ್ಕಳಿಗೇ ಟಿಕೆಟ್ ನೀಡಿರುವುದು ಥಗ್ಗಿಂಗ್ ಆಗಿದೆ” ಎಂದು ವಾಗ್ದಾಳಿ ನಡೆಸಿದರು. ಮಹಿಳಾ ಮತದಾರರ ಕುರಿತು ಸ್ಮೃತಿ ಇರಾನಿ ಮಾತನಾಡಿ, ಹೆಣ್ಣುಮಕ್ಕಳು ಧಾರಾವಾಹಿಗಳನ್ನು ನೋಡುವುದನ್ನು ಬಿಡಬೇಕು. ಆ ಮೂಲಕ ರಾಜಕೀಯ ವಿಚಾರಗಳ ಕಡೆ ಹೆಚ್ಚು ಗಮನ ಹರಿಸಬೇಕು. ಮಹಿಳಾ ಮತದಾರರ ವೋಟುಗಳು ನಿರ್ಣಾಯಕವಾಗಿವೆ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದರು.