For the best experience, open
https://m.newskannada.com
on your mobile browser.
Advertisement

ಬೇಸಿಗೆಯಲ್ಲಿ ಸೊಳ್ಳೆಗಳು ಕಾಯಿಲೆ ತರಬಹುದು ಹುಷಾರ್!

ಬೇಸಿಗೆ ಕಾಲದಲ್ಲಿ ಬಿಸಿಲಿಗೆ ಒಗ್ಗಿಕೊಂಡು ದಿನ ಕಳೆಯುವುದೇ ಕಷ್ಟವಾಗಿರುವಾಗ ಕೊಳಚೆ ನೀರುಗಳು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಅವುಗಳ ಹಾವಳಿಯೂ ಜಾಸ್ತಿಯಾಗಿದೆ. ಹೀಗಾಗಿ ಈ ಸೊಳ್ಳೆಗಳ ಬಗ್ಗೆ ನಿರ್ಲಕ್ಷ್ಯವಹಿಸದೆ ಅವುಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಏಕೆಂದರೆ ಇವು ಬೇಸಿಗೆಯಲ್ಲಿ ಮಲೇರಿಯಾವನ್ನು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
11:02 AM Mar 12, 2024 IST | Gayathri SG
ಬೇಸಿಗೆಯಲ್ಲಿ ಸೊಳ್ಳೆಗಳು ಕಾಯಿಲೆ ತರಬಹುದು ಹುಷಾರ್

ಬೇಸಿಗೆ ಕಾಲದಲ್ಲಿ ಬಿಸಿಲಿಗೆ ಒಗ್ಗಿಕೊಂಡು ದಿನ ಕಳೆಯುವುದೇ ಕಷ್ಟವಾಗಿರುವಾಗ ಕೊಳಚೆ ನೀರುಗಳು ನಿಲ್ಲುವ ಸ್ಥಳಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು, ಅವುಗಳ ಹಾವಳಿಯೂ ಜಾಸ್ತಿಯಾಗಿದೆ. ಹೀಗಾಗಿ ಈ ಸೊಳ್ಳೆಗಳ ಬಗ್ಗೆ ನಿರ್ಲಕ್ಷ್ಯವಹಿಸದೆ ಅವುಗಳ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಏಕೆಂದರೆ ಇವು ಬೇಸಿಗೆಯಲ್ಲಿ ಮಲೇರಿಯಾವನ್ನು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

Advertisement

ಬೇಸಿಗೆ ಕಾಲದಲ್ಲಿ ಸೊಳ್ಳೆಗಳು ಒಂದಲ್ಲ ಒಂದು ರೀತಿಯ ಸೋಂಕುಗಳನ್ನು ಹರಡುತ್ತಲೇ ಬಂದಿವೆ. ಅದರಲ್ಲೂ ಈ ಹಿಂದೆ ಮಲೇರಿಯಾ ರೋಗವಂತು ಎಲ್ಲರನ್ನು ಬಿಟ್ಟು ಬಿಡದೆ ಕಾಡುತ್ತಿತ್ತು. ಈಗಲೂ ಅದು ಕಾಡಬಹುದು ಅದಕ್ಕೆ ಸೊಳ್ಳೆ ಸಹಕಾರಿಯಾಗಿದೆ. ಸೊಳ್ಳೆಯಿಂದ ಹರಡುವ ರೋಗದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪ್ರಚಾರ ಮಾಡಿದರೂ ಕೂಡ ಕೆಲವೊಮ್ಮೆ ಗೊತ್ತೇ ಆಗದಂತೆ ಅಟಕಾಯಿಸಿಬಿಡುತ್ತದೆ.

ಮಲೇರಿಯಾದ ಬಗ್ಗೆ ಹೇಳುವುದಾದರೆ ಇದರಲ್ಲಿ ನಾಲ್ಕು ಪ್ರಬೇಧಗಳಿದ್ದು, ಶೀಘ್ರ ಪತ್ತೆ, ತ್ವರಿತ ಚಿಕಿತ್ಸೆ ಎಂಬಂತೆ ರೋಗಕ್ಕೆ ಚಿಕಿತ್ಸೆಯೂ ಲಭ್ಯವಿದ್ದು, ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದಾಗಿದೆ. ಹಾಗೆಂದು ಮಲೇರಿಯಾ ರೋಗದ ನಿರ್ಲಕ್ಷ್ಯವೂ ಸಲ್ಲದು. ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಜೀವಿಯಿಂದ ಉಂಟಾಗುವ ಮಲೇರಿಯಾ ರೋಗವು ಅನಾಫಿಲೀಸ್ ಜಾತಿಗೆ ಸೇರಿದ ಸೋಂಕಿತ ಹೆಣ್ಣು ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ರೋಗ ಹರಡುತ್ತದೆ.

Advertisement

ಬೇಸಿಗೆ ದಿನಗಳಲ್ಲಿ ಅನಾಫಿಲೀಸ್ ಜಾತಿಯ ಸೊಳ್ಳೆಗಳು ನೀರಿನ ತಾಣಗಳಾದ ಕೆರೆಗಳು, ಬಾವಿಗಳು, ಕಾಲುವೆ, ಹೊಂಡ, ಇತರೆ ಅನುಪಯುಕ್ತ ಘನತ್ಯಾಜ್ಯ ವಸ್ತುಗಳನ್ನು ಆಶ್ರಯ ತಾಣ ಮಾಡಿಕೊಂಡು ಅಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಮುಂದೆ ಮನುಷ್ಯನಿಗೆ ಕಚ್ಚುತ್ತಾ ತನ್ನೊಂದಿಗೆ ಮಲೇರಿಯಾ ರೋಗವನ್ನು ಹರಡುತ್ತಾ ಹೋಗುತ್ತವೆ.

ಮಲೇರಿಯಾ ರೋಗವನ್ನು ತಡೆಗಟ್ಟಲು ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಬೇಕು. ಮನೆಗಳ ಕಿಟಕಿ ಬಾಗಿಲುಗಳಿಗೆ ಸೊಳ್ಳೆಗಳು ನುಸುಳದಂತೆ ಜಾಲರಿ ಅಳವಡಿಸಿಕೊಳ್ಳಬೇಕು. ಮಲಗುವ ವೇಳೆ ಸೊಳ್ಳೆ ಪರದೆ ಕಟ್ಟಿಕೊಳ್ಳಬೇಕು. ಮನೆಯ ಸುತ್ತಮುತ್ತಲ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಮಲೇರಿಯಾ ಜ್ವರ ಹೆಚ್ಚು ಪ್ರಕರಣಗಳಿರುವ ಸ್ಥಳಗಳಿಗೆ ಹೋಗಿಬಂದಾಗ ಮಲೇರಿಯಾ ರಕ್ತ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.

ಬೇಸಿಗೆ ಕಾಲವಾಗಿರುವುದರಿಂದ ಶುಚಿತ್ವ ಇಲ್ಲದ ಕಡೆಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಅವು ಮಲೇರಿಯಾದಂತಹ ಕಾಯಿಲೆಯನ್ನು ತರುವ ಕಾರಣ ಅಂತಹ ಪ್ರದೇಶಗಳನ್ನು ಗುರುತಿಸಿ ಸೊಳ್ಳೆಗಳ ನಿರ್ಮೂಲನೆಗೆ ಮುಂದಾಗಬೇಕು. ಬೇಸಿಗೆ ನೆಮ್ಮದಿಯಾಗಿ ಇರುವ ಕಾಲವಂತು ಅಲ್ಲವೇ ಅಲ್ಲ. ಕೆಲಸ, ಓಡಾಟಗಳ ನಡುವೆಯೂ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಒಂದಷ್ಟು ಮುಂಜಾಗ್ರತೆ ವಹಿಸುವುದು ಬಲು ಅಗತ್ಯವಾಗಿದೆ.

Advertisement
Tags :
Advertisement