ಬೀದರ್: ಬಿಗ್ಬಾಸ್ ಸ್ಪರ್ಧಿ ಅರುಣ್ ಮಾಶೆಟ್ಟಿಗೆ ಸನ್ಮಾನ
ಬೀದರ್: ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ಬಾಸ್ ಸೀಸನ್ 17ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಭಾಲ್ಕಿ ತಾಲೂಕಿನ ರಾಚಪ್ಪ ಗೌಡಗಾಂವ ನಿವಾಸಿ ಅರುಣ್ ಬಾಬುರಾವ್ ಮಾಶೆಟ್ಟಿ ಅವರನ್ನು ನಗರದಲ್ಲಿ ಸನ್ಮಾನಿಸಲಾಯಿತು.
ಮಾಶೆಟ್ಟಿ ಅಭಿಮಾನಿಗಳ ಬಳಗದಿಂದ ಗುಂಪಾ ರಿಂಗ್ರೋಡ್ ಹತ್ತಿರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಗರದ ಶಹಾಪುರ ಗೇಟ್ ಬಳಿ ಮಾಶೆಟ್ಟಿ ಅವರನ್ನು ಸ್ವಾಗತಿಸಿ, ಆನಂತರ ಗುಂಪಾ ರಿಂಗ್ರೋಡ್ನಲ್ಲಿ ಕ್ರೇನ್ನಿಂದ ಬೃಹತ್ ಹೂಮಾಲೆ ಹಾಕಿ ಬರಮಾಡಿಕೊಳ್ಳಲಾಯಿತು. ಆನಂತರ ವೇದಿಕೆಯಲ್ಲಿ ಸನ್ಮಾನ ನೆರವೇರಿಸಲಾಯಿತು. ಮಾಶೆಟ್ಟಿ ಅವರು ಮೂಲತಃ ಭಾಲ್ಕಿಯವರಾಗಿದ್ದು, ದಶಕಗಳ ಹಿಂದೆ ಅವರ ಕುಟುಂಬದವರು ಹೈದರಾಬಾದ್ಗೆ ಹೋಗಿ ನೆಲೆಸಿದ್ದಾರೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅರುಣ್ ಮಾಶೆಟ್ಟಿ, 'ಎಲ್ಲ ಸನ್ಮಾನಕ್ಕಿಂತ ತವರಿನ ಸನ್ಮಾನ ಬಹಳ ಮುಖ್ಯವಾದುದು. ಬಿಗ್ಬಾಸ್ನಲ್ಲಿ ಸ್ಪರ್ಧಿಸಿ ಅಂತಿಮ ಹಂತದ ವರೆಗೆ ಹೋಗಿದ್ದು ಬಹಳ ಖುಷಿ ತಂದಿದೆ' ಎಂದರು.
ಅಭಿಮಾನಿಗಳ ಬಳಗದ ಮಲಿಕನಾಥ ಮಡಿಗೆ, ವೀರಶೆಟ್ಟಿ ಪಾಟೀಲ ನೌಬಾದ್, ಮಹೇಶ ಮೈಲಾರೆ, ಶ್ರೀನಿವಾಸರಡ್ಡಿ, ಮಹೇಶ ಖೇಣಿ, ನಾಗರಾಜ ಜೋಗಿ, ಪವನ್ ಉಂಡೆ, ಹಣ್ಮು ಪಾಜಿ, ಫಿಲಿಪ್, ರಾಹುಲ್, ಜ್ವಾಯ್, ಸೋನು ಇತರರಿದ್ದರು.