ಕೆಫೆ ಸ್ಫೋಟ ಕೇಸ್; ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟ ಶಂಕಿತ !
ಬೆಂಗಳೂರು: ನಗರದ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನ ಜಾಡು ಹಿಡಿದ ಎನ್ಐಎಗೆ ಚೆನ್ನೈ ಲಿಂಕ್ ಸಿಕ್ಕಿದ್ದು, ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಶಂಕಿತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನೂ ಸ್ಫೋಟಕ್ಕೂ ಮುನ್ನ 2 ತಿಂಗಳು ಇತ ತಮಿಳುನಾಡಿನಲ್ಲಿದ್ದ. ಶಂಕಿತ ಧರಿಸಿದ್ದ ಟೋಪಿಯ ಮೂಲ ಪತ್ತೆ ಹಚ್ಚಿದ್ದ ಎನ್ಐಎಗೆ ಇದನ್ನು ತಮಿಳುನಾಡಿನ ಮಾಲ್ವೊಂದರಲ್ಲಿ ಖರೀದಿಸಲಾಗಿರುವ ಮಾಹಿತಿ ದೊರೆತಿದ್ದು, ಜೊತೆಗೆ ಟೊಪ್ಪಿ ಖರೀದಿ ವೇಳೆ ಶಂಕಿತನ ಜೊತೆಗೆ ಮತ್ತೋರ್ವ ವ್ಯಕ್ತಿ ಇರುವುದು ಮಾಲ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಪತ್ತೆಯಾದ ಕ್ಯಾಪ್ನಲ್ಲಿ ಶಂಕಿತನ ಕೂದಲು ಪತ್ತೆಯಾಗಿದ್ದು, ಎನ್ಐಎ ಅಧಿಕಾರಿಗಳು ಡಿಎನ್ಎ ಟೆಸ್ಟ್ಗೆ ನೀಡಿದ್ದಾರೆ.
ಮುಖ್ಯವಾಗಿ ಎನ್ಐಎ ತನಿಖೆ ವೇಳೆ ಆ ಇಬ್ಬರು ಕರ್ನಾಟಕದವರೆಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಜೊತೆಗೆ ಅವರು ಶಿವಮೊಗ್ಗೆ ಜಿಲ್ಲೆಯ ಮುಸಾವೀರ್ ಮತ್ತು ಹುಸೇನ್ ಶಬೀದ್ ಎಂಬ ಕುರಿತು ಸುಳಿವು ದೊರೆತಿದೆ. ಇವರು ಎರಡು ತಿಂಗಳು ತಮಿಳುನಾಡಿನ ಲಾಡ್ಜ್ನಲ್ಲಿ ಉಳಿದುಕೊಂಡಿರುವುದು ಕೂಡ ಪತ್ತೆಯಾಗಿದೆ. ಹಾಗಾದರೆ ಶಂಕಿತರಿಗೂ ತಮಿಳುನಾಡಿಗೂ ಏನು ಸಂಬಂಧ ಎಂಬ ಬಗ್ಗೆ ತನಿಖೆ ಶುರುವಾಗಿದ್ದು, ಸದ್ಯ ಸಿಸಿಟಿವಿಗಳ ಆಧರಿಸಿ ಆರೋಪಿಗಳ ಜಾಲ ಪತ್ತೆ ಹಚ್ಚಲಾಗುತ್ತಿದೆ.