ಸಿ.ಪಿ ಯೋಗೇಶ್ವರ್ ಬಾವ ಮಹದೇವಯ್ಯ ಹತ್ಯೆ ಶಂಕೆ ?
ಚಾಮರಾಜನಗರ: ಬಿಜೆಪಿ ನಾಯಕ, ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಬಾವ ಮಹದೇವಯ್ಯ ಕಿಡ್ನ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹದೇವಯ್ಯ ಅವರನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿರೋ ಶಂಕೆ ವ್ಯಕ್ತವಾಗಿದೆ. ಈ ಕೃತ್ಯಕ್ಕೆ ಸಂಬಂಧಿಸಿದ ಸಿಸಿ ಕ್ಯಾಮೆರಾ ದೃಶ್ಯಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದು, ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.
ಕಳೆದ ನವೆಂಬರ್ 2ರಂದೇ ಮಹದೇವಯ್ಯ ಅವರ ಕೊಲೆಯಾಗಿದೆ ಅನ್ನೋ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಸಿಸಿ ಕ್ಯಾಮೆರಾ ದೃಶ್ಯಗಳು ಪ್ರಬಲ ಸಾಕ್ಷ್ಯ ಒದಗಿಸಿದೆ. ಸುಮಾರು 15 ನಿಮಿಷ ಕಾಡಿನ ದಾರಿಯಲ್ಲಿ ಓಡಾಡಿರುವ ಅಪಹರಣಕಾರರು, ಹನೂರು- ನಾಲ್ ರೋಡ್- ಈರೋಡ್ ರಸ್ತೆಯಲ್ಲಿ ಸಂಚಾರ ಮಾಡಿದ್ದಾರೆ. ವಾಪಸ್ ಹೋಗುವಾಗ ರಾಮಪುರದಲ್ಲಿ ಕಾರು ನಿಲ್ಲಿಸಿ ಎಸ್ಕೇಪ್ ಆಗಿದ್ದಾರೆ.
ಮಹದೇವಯ್ಯ ಅವರನ್ನು ಬೇರೆ ಕಡೆ ಕೊಲೆ ಮಾಡಿ ಮಲೆ ಮಹದೇಶ್ವರ ಬೆಟ್ಟಕ್ಕೆ ತಂದಿರುವ ಸಾಧ್ಯತೆ ಇದೆ. ಅಪರಿಚಿತರ ಚಲನವಲನದ ಆಧಾರದ ಮೇಲೆ ಪೊಲೀಸರು, ಅರಣ್ಯ ಇಲಾಖೆಯಿಂದ ಕೂಂಬಿಂಗ್ ಕಾರ್ಯಾಚರಣೆ ನಡೆದಿದೆ. ಚಾಮರಾಜನಗರದ ರಾಮಾಪುರ ಗ್ರಾಮದ ಬಳಿ ಮಹದೇವಯ್ಯನವರ ಕಾರು ಪತ್ತೆಯಾಗಿದೆ. ಇನ್ನು ಪ್ರಕರಣದ ಕುರಿತು ಮತ್ತಷ್ಟು ತನಿಖೆ ನಡೆಯುತ್ತಿದೆ.