ರಸ್ತೆ ತಿರುವಿನ ಅಪಾಯಕಾರಿ ವಿದ್ಯುತ್ ತಂತಿಗಳು: ಸುರಕ್ಷಿತ ಎತ್ತರಕ್ಕೆ ಏರಿಕೆ
ಸಾಣೂರು: ಸಾಣೂರಿನ ಲೈನ್ ಮ್ಯಾನ್ ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್ ಕಂಬಗಳ ತಂತಿಗಳನ್ನು ಮೇಲಕ್ಕೆ ಎತ್ತರಿಸಿ ಸುರಕ್ಷಿತ ಅಂತರದಲ್ಲಿ ಪುನಸ್ಥಾಪಿಸಿದ್ದಾರೆ.
ಇದರಿಂದಾಗಿ ಪ್ರತಿನಿತ್ಯ ಇರುವತ್ತೂರು ರಸ್ತೆಯಲ್ಲಿ ಸಂಚರಿಸುವ ಎತ್ತರದ ಲಾರಿ ಮತ್ತು ವಾಹನಗಳಿಗೆ ವಿದ್ಯುತ್ ತಂತಿ ತಾಗಿ ಆಗಾಗ ಬೆಂಕಿಯ ಕಿಡಿಗಳು ಹಾರಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗುವುದು ತಪ್ಪಿ ಹೋಗಿದೆ.
ಕಳೆದ ಒಂದು ತಿಂಗಳಿನಿಂದ ಸ್ಥಳೀಯ ನಾಗರಿಕರು, ರಿಕ್ಷಾ ಚಾಲಕರು ಮತ್ತು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಈ ಆತಂಕಕಾರಿ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣ ಮತ್ತು ಪತ್ರಿಕೆಯ ಮೂಲಕ ಕಾರ್ಕಳ ಮೆಸ್ಕಾಂ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕಾರ್ಕಳ ಮೆಸ್ಕಾಂ ಮತ್ತು ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಕಂಪನಿಯ ಮಧ್ಯದ ಹೊಂದಾಣಿಕೆಯ ಕೊರತೆಯಿಂದ ವಿದ್ಯುತ್ ತಂತಿಗಳನ್ನು ಸುರಕ್ಷಿತ ಎತ್ತರಕ್ಕೆ ಏರಿಸುವ ಕೆಲಸ ನೆನೆಗುದಿಗೆ ಬಿದ್ದಿತ್ತು.
ಇದೀಗ ತಡವಾಗಿಯಾದರೂ ಕಾರ್ಕಳ ಮೆಸ್ಕಾಂ ಎಚ್ಚೆತ್ತು ತೀರಾ ಕೆಳಮಟ್ಟದಲ್ಲಿದ್ದ ವಿದ್ಯುತ್ತಂತಿಗಳನ್ನು ಸುರಕ್ಷಿತ ಎತ್ತರಕ್ಕೆ ಏರಿಸಿ ಸಂಭಾವ್ಯ ಅಪಾಯದಿಂದ ಪಾರಾಗಿ ದಿನಂಪ್ರತಿ ಸಂಚರಿಸುವ ವಾಹನ ಚಾಲಕರು ಹಾಗೂ ಪ್ರಯಾಣಿಕರು ನಿಶ್ಚಿಂತೆಯಿಂದ ಇರುವಂತಾಗಿದೆ.
ನಾಳೆ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿರುವ ಅಪಾಯಕಾರಿ ಟ್ರಾನ್ಸ್ಫಾರ್ಮರ್ ಮತ್ತು ವಿದ್ಯುತ್ ಕಂಬವನ್ನು ಸುರಕ್ಷಿತ ಅಂತರಕ್ಕೆ ರಸ್ತೆ ಬದಿ ಹಿಂದಕ್ಕೆ ಸ್ಥಳಾಂತರ ಮಾಡುವ ಕೆಲಸ ಕಾರ್ಯಗಳನ್ನು ದಿಲೀಪ್ ಬಿಲ್ಡ್ ಕಾನ್ ಕಂಪನಿಯ ವಿದ್ಯುತ್ ಗುತ್ತಿಗೆದಾರರು ಕಾರ್ಕಳ ಮೆಸ್ಕಾಂ ಸಹಕಾರದಿಂದ ಮಾಡುತ್ತೇನೆಂದು ತಿಳಿಸಿರುತ್ತಾರೆ.