ಇಂದು ಕಮಾಂಡೋ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪುಣ್ಯಸ್ಮರಣೆ
ದೆಹಲಿ: ಸಂದೀಪ್ ಉನ್ನಿಕೃಷ್ಣನ್. . . .ಅದೆಷ್ಟೇ ವರ್ಷಗಳಾಗಲಿ ಭಾರತೀಯರು ಈ ವೀರ ಯೋಧನನ್ನು ಎಂದಿಗೂ ಮರೆಯೋದಿಲ್ಲ. 2008ರ ನವೆಂಬರ್ 26ರಂದು ಮುಂಬೈನ 100 ವರ್ಷಗಳ ಇತಿಹಾಸ ಇರುವ ತಾಜ್ ಹೋಟೆಲ್ಗಳ ಮೇಲೆ ಪಾಕ್ ಬೆಂಬಲಿತ ಲಷ್ಕರ್ ಎ ತೊಯ್ಬಾ ಸಂಘಟನೆಯ ಉಗ್ರರು ದಾಳಿ ನಡೆಸಿದ್ದಾಗ ಅದೆಷ್ಟೋ ಜನರನ್ನು ರಕ್ಷಿಸಿ, ತನ್ನ ಪ್ರಾಣವನ್ನೇ ಬಿಟ್ಟ ಕೆಚ್ಚೆದೆಯ ನಾಯಕ.
2008ನೇ ಇಸ್ವಿ ನವೆಂಬರ್ 26ರಂದು ಮುಂಬೈ ಹೋಟೆಲ್ಗಳ ಮೇಲೆ ಉಗ್ರದಾಳಿ ನಡೆದಾಗ ಎನ್ಎಸ್ಜಿಯ ಕಮಾಂಡೋ ಆಗಿದ್ದ ಮೇಜರ್ ಉನ್ನೀಕೃಷ್ಣನ್ ಮತ್ತು ಅವರ ತಂಡ ಭಯೋತ್ಪಾದಕರೊಂದಿಗಿನ ಸೆಣೆಸಾಟದಲ್ಲಿ ಮುಂಚೂಣಿಯಲ್ಲಿತ್ತು.
ಉಗ್ರರು ಇದ್ದ ತಾಜ್ ಹೋಟೆಲ್ನ ಒಂದೊಂದೇ ಫ್ಲೋರ್ನ್ನು ಎನ್ಎಸ್ಜಿ ಕಮಾಂಡೋಗಳು ಸುತ್ತುವರಿಯುತ್ತ, ಒಳಗಿದ್ದ ಜನರನ್ನು ರಕ್ಷಣೆ ಮಾಡುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದರು. 26ರಂದು ಉಗ್ರರ ಹಿಡಿತಕ್ಕೆ ಸಿಲುಕಿದ್ದ ಹೋಟೆಲ್ನಲ್ಲಿ ನಾಲ್ಕು ದಿನ ಅಂದರೆ ನವೆಂಬರ್ 29ರವರೆಗೂ ಭಾರತೀಯ ಯೋಧರು ಮತ್ತು ಭಯೋತ್ಪಾದಕರ ನಡುವಿನ ಫೈಟ್ ಮುಂದುವರಿದಿತ್ತು.
ಮೊದಲಿಗೆ ಆರನೇ ಮಹಡಿಯಲ್ಲಿದ್ದ 14 ಒತ್ತೆಯಾಳುಗಳನ್ನು ಸಂದೀಪ್ ತಂಡ ರಕ್ಷಿಸಿತ್ತು. ಅಷ್ಟರಲ್ಲೇ ಸಂದೀಪ್ ತಂಡದ ಇರುವಿಕೆಯನ್ನು ಗಮನಿಸಿದ ಉಗ್ರರು ಬಾಂಬುಗಳನ್ನು ಸಿಡಿಸ ತೊಡಗಿದರು. ಬಾಂಬು ಸಿಡಿಯುವಷ್ಟರಲ್ಲಿ ಮೇಜರ್ ಸಂದೀಪ್ ತಂಡ ಸಿಬ್ಬಂದಿಗೆ ಗಂಭೀರ ಗಾಯಗಳಾದವು. ಇದೇ ಅವಕಾಶ ಬಳಸಿಕೊಂಡ ಉಗ್ರನೋರ್ವ ಸಂದೀಪ್ ಅವರನ್ನು ಹಿಂಬಾಲಿಸಿದರು. ಈ ವೇಳೆ ಉಗ್ರರನ್ನು ಹೊಡೆಯಲು ಮುಂದಾದ ಮತ್ತೋರ್ವ ಯೋಧನಿಗೆ ಸಂದೀಪ್ “ನೀವ್ಯಾರು ಮೇಲೆ ಬರಬೇಡಿ, ನಾನೇ ಇವರನ್ನು ಹೊಡೆದುರುಳಿಸುತ್ತಾನೆ,” ಎಂದು ಹೇಳಿದರು. ಇಂದಿಗೆ ಸಂದೀಪ್ ಅವರ ಈ ಮಾತುಗಳ ಎಲ್ಲರ ಕಿವಿಗಳಲ್ಲೂ ಝೇಂಕರಿಸುತ್ತಿದೆ.
ಇನ್ನು ನ. 28ರಂದು ಸಂದೀಪ್ ಉನ್ನೀಕೃಷ್ಣನ್ ಉಗ್ರರ ಗುಂಡೇಟಿಗೆ ಕೊನೆಯುಸಿರು ಎಳೆದರು. ಹೋಟೆಲ್ನಲ್ಲಿ ಇದ್ದವರನ್ನು ಮತ್ತು ಗಾಯಗೊಂಡಿದ್ದ ತಮ್ಮ ಸಹೋದ್ಯೋಗಿಗಳನ್ನು ರಕ್ಷಿಸುತ್ತ ತಮ್ಮ ಜೀವವನ್ನೇ ಬಿಟ್ಟರು. ಆಗ ಅವರಿಗೆ ಕೇವಲ 31ವರ್ಷ.
ಸೈನ್ಯ ಸೇರಿದ್ದು 1995ರಲ್ಲಿ ಸಂದೀಪ್ ಉನ್ನೀಕೃಷ್ಣನ್ ಅವರ ಸೇನಾ ಪ್ರಯಾಣ ಶುರುವಾಗಿದ್ದು 1995ರಿಂದ. ಮಹಾರಾಷ್ಟ್ರದ ಪುಣೆಯಲ್ಲಿರುವ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ಸೇರಿದರು. ಇನ್ನು ಭಾರತೀಯ ಸೇನೆಯಲ್ಲಿ ಅವರು ಸೇವೆ ಪ್ರಾರಂಭಿಸಿದ್ದು 1999ರಿಂದ. 2008ರವರೆಗೆ ದಿಟ್ಟತನ, ಧೈರ್ಯದಿಂದ ದೇಶಸೇವೆ ಮಾಡಿದ ಸಂದೀಪ್ ಉನ್ನಿಕೃಷ್ಣನ್ಗೆ ಸೈನ್ಯ ಸೇವಾ ಮೆಡಲ್, ಸ್ಪೆಶಲ್ ಸರ್ವೀಸ್ ಮೆಡಲ್, ಆಪರೇಶನ್ ಪರಾಕ್ರಮ್ ಮೆಡಲ್ ಗೌರವ ಸಿಕ್ಕಿದೆ. ಅದಕ್ಕೂ ಮಿಗಿಲಾಗಿ ಇವರು ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತರು.