ಬಾವುಟಗುಡ್ಡೆಯಲ್ಲಿ ಕಾರ್ಮಿಕ ಸಂಘಟನೆಯ ಜಿಲ್ಲಾ ಮಟ್ಟದ ಸಮಾವೇಶ
ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಇಂಟಕ್ ಕಾರ್ಮಿಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಮಾವೇಶ ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಜರಗಿತು.
ಮಾಜಿ ಶಾಸಕರಾದ ಜೆಆರ್ ಲೋಬೋವ ಅವರು ದೇಶದ ಬೃಹತ್ ಕಾರ್ಮಿಕ ಸಂಘಟನೆಯಾದ ಇಂಟಕ್ ಸಂಘಟನೆಯು ಕಾಂಗ್ರೆಸ್ಸಿನ ಅವಿಭಾಜ್ಯ ಅಂಗವಾಗಿದೆ. ಕಾರ್ಮಿಕರು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನ ತಮಗೆ ಒಳಿತಾಗುವಂತೆ ಚಲಾಯಿಸುವ ಮೂಲಕ ಕಾರ್ಮಿಕ ಶಕ್ತಿಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಅಧ್ಯಕ್ಷರಾದ ಮನೋಹರ್ ಶೆಟ್ಟಿ ಅವರು ಮಾತನಾಡಿ, ಕಾರ್ಮಿಕರಿಗೆ ಮತದಾನವು ಒಂದು ಪ್ರಬಲ ಅಸ್ತ್ರವಾಗಿದೆ. ಮತದಾನವನ್ನು ಕಡ್ಡಾಯವಾಗಿ ಮಾಡುವ ಮೂಲಕ ನಿಮ್ಮ ನಿಮ್ಮ ಕುಟುಂಬದ ಒಳಿತಿಗೆ ಮುಂದಾಗಬೇಕು.
ಮತದಾನದ ಹಕ್ಕನ್ನು ನಮ್ಮ ಸಂವಿಧಾನವು ನೀಡಿದೆ ಯಾವುದೇ ಕಾರಣಕ್ಕೂ ಈ ಒಂದು ನಮ್ಮ ಹಕ್ಕನ್ನ ವ್ಯರ್ಥ ಮಾಡಬಾರದು ಎಂದು ಕರೆ ನೀಡಿದರು. ರಾಷ್ಟ್ರೀಯ ಇಂಟಕ್ ಕಾರ್ಯದರ್ಶಿ ರಾಕೇಶ್ ಮಲ್ಲಿ ಅವರು ಮಾತನಾಡಿ, ಚುನಾವಣೆಯ ಬಳಿಕ ಜಿಲ್ಲೆಯಲ್ಲಿ ಬೃಹತ್ ಕಾರ್ಮಿಕ ಸಮಾವೇಶವನ್ನು ಆಯೋಜಿಸಲಾಗುತ್ತದೆ. ಇಂದು ಕಾರ್ಮಿಕರಿಗೆ ಉದ್ಯೋಗ ದೊರಕದಂತಹ ಸ್ಥಿತಿ ಇದೆ.
ಕೇಂದ್ರ ಸರಕಾರದ ತಪ್ಪು ನೀತಿಯಿಂದ ಎನ್ ಎಂ ಪಿ ಟಿ, ಕುದುರೆಮುಖ ಸೇರಿದಂತೆ ಸರಕಾರಿ ಕಂಪನಿಗಳಲ್ಲಿ ತೀವ್ರವಾಗಿ ಉದ್ಯೋಗ ಕಡಿತವಾಗುತ್ತಿದೆ.ಇದರಿಂದ ಕಾರ್ಮಿಕ ವರ್ಗ ಉದ್ಯೋಗ ಭದ್ರತೆಯಿಂದ ವಂಚಿತವಾಗಿದ್ದು ಈ ನಿಟ್ಟಿನಲ್ಲಿ ಕಾರ್ಮಿಕ ಸಮಾವೇಶದ ಅಗತ್ಯವಿದೆ, ನಮ್ಮ ಹಕ್ಕನ್ನು ಕೇಳುವ ಸಮಾವೇಶವಾಗಿದೆ ಎಂದು ರಾಕೇಶ್ ಮಲ್ಲಿಯವರು ನುಡಿದರು.
ವೇದಿಕೆಯಲ್ಲಿ ಕಾರ್ಮಿಕ ಮುಖಂಡರಾದ ಸುರೇಶ್ ಪಿಕೆ, ಸುರೇಶ್ ಬಾಬು,ಮುಡಾ ಸದಸ್ಯೆ ಸಬಿತಾ ಮಿಸ್ಕಿತ್, ದಿನಕರ್ ಶೆಟ್ಟಿ ಅವರು ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದರು. ವಿನೋದ ಪಣಂಬೂರು, ಸಂಪತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.