ಮನೆ ಮನೆ ಮತದಾನ ಏ.14 ರಿಂದ 16ರ ತನಕ ನಡೆಯಲಿದೆ: ಜುಬಿನ್ ಮೊಹಪಾತ್ರ
ಪುತ್ತೂರು: ದಕ್ಷಿಣ ಕನ್ನಡ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆ ಮತದಾನಕ್ಕೆ ಅರ್ಹ ವ್ಯಕ್ತಿಗಳಾದ 85 ವರ್ಷ ಮೇಲ್ಪಟ್ಟವರು 777 ಮಂದಿ ಮತ್ತು 340 ಅಂಗವಿಕಲರು ಮನೆಯಲ್ಲೇ ಮತದಾನ ಚಲಾಯಿಸಲಿದ್ದಾರೆ. ಈ ಮತದಾನ ಪ್ರಕ್ರಿಯೆ ಏ.14 ರಿಂದ 16ರ ತನಕ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿಯಾಗಿರುವ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಈ ಹಿಂದೆ 85 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರಿಗೆ ಮನೆಯಲ್ಲೇ ಮತದಾನ ಮಾಡಲು ಅರ್ಜಿ ನಮೂನೆ ನೀಡಿದ್ದೆವು. ಈ ಅರ್ಜಿಯ ಮೂಲಕ ಅವರು ಮನೆಯಲ್ಲೇ ಅಥವಾ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ತಮ್ಮ ಅಭಿಪ್ರಾಯ ಮಂಡಿಸಿದಂತೆ ಮನೆಯಲ್ಲೇ ಮತದಾನ ಮಾಡುವ 85 ವರ್ಷ ಮೇಲ್ಪಟ್ಟವರು 777 ಮಂದಿ ಮತ್ತು 340 ಅಂಗವಿಕಲರು ಮನೆಯಲ್ಲೇ ಮತ ಚಲಾಯಿಸುವ ಮನವಿ ಮಾಡಿದ್ದಾರೆ.
ಈ ಮತದಾನ ಪ್ರಕ್ರಿಯೆಯು ಕ್ಷೇತ್ರ ಶಿಕ್ಷಣಾಧಿಕಾರಿಯವರ ನೇತೃತ್ವದಲ್ಲಿ ನಡೆಯಲಿದೆ. ಅವರ ಕೆಳಗೆ ತಂಡವೊಂದು ರಚನೆ ಮಾಡಲಾಗಿದೆ. ಆ ತಂಡ ಎಲ್ಲಾ ಅರ್ಹ ಮತದಾರರಿಗೆ ಕರೆ ಮಾಡಿ ಮತದಾನ ಪ್ರಕ್ರಿಯೆಗೆ ಮನೆಗೆ ಬರುವ ದಿನಾಂಕವನ್ನು ತಿಳಿಸುತ್ತಾರೆ. ಈ ಕುರಿತು ರಾಜಕೀಯ ಪಕ್ಷಗಳಿಗೂ ಎಷ್ಟು ಮಂದಿ ಮತದಾನ ಮಾಡುತ್ತಾರೆ ಮತ್ತು ಅವರ ಮತಪಟ್ಟಿಗಳ ಕುರಿತು ಮಾಹಿತಿ ನೀಡಲಾಗಿದೆ.
ಮನೆ ಮನೆ ಮತದಾನದಲ್ಲಿ ಜಿಲ್ಲಾಧಿಕಾರಿ ಅಂತದಲ್ಲಿ ನೇಮಕವಾಗಿರುವ ಪಿ.ಆರ್.ಒ, ಕ್ಯಾಮರ ಮ್ಯಾನ್, ಪೊಲೀಸರು, ಮೈಕ್ರೋ ಅಬ್ಸರರ್ ಅವರು ಭಾಗವಹಿಸಲಿದ್ದಾರೆ. ಅವರಿಗೆ ಯಾವ ರೀತಿ ಮತದಾನ ಪ್ರಕ್ರಿಯೆ ನಡೆಸಬೇಕೆಂದು ವಿವೇಕಾನಂದ ಶಾಲೆಯಲ್ಲಿ ತರಬೇತಿ ನಡೆಯುತ್ತಿದೆ. ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಯಲಿದೆ ಎಂದು ಹೇಳಿದರು.
ಏ.14ರಂದು ಬೆಳಿಗ್ಗೆ ಸೆಕ್ಟರ್ ಅಧಿಕಾರಿಗಳು ವಿವಿಧ ನಿಗದಿ ಮಾಡಿದ ರೂಟ್ಗಳಲ್ಲಿ ತೆರಳಲಿದ್ದಾರೆ. ಯಾವ ಬೂತ್ಗೆ ಪ್ರಥಮ ಯಾವ ಬೂತ್ಗೆ ಕೊನೆಗೆ ಹೋಗಬೇಕೆಂದು ಪಟ್ಟಿ ಮಾಡಿದಂತೆ ಸೆಕ್ಟರ್ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 8 ರಿಂದ ಸಂಜೆ ಗಂಟೆ 6ರ ತನಕ ಮತದಾನ ಪ್ರಕ್ರಿಯೆ ನಡೆಯಲಿದೆ.
ಚುನಾವಣಾ ಕರ್ತವ್ಯದಲ್ಲಿರುವವರಿಗೆ ಪುತ್ತೂರಿನಲ್ಲಿ ಮತದಾನ ಹಕ್ಕು ಇದ್ದರೆ ಅವರಿಗೆ ಫಾರ್ಮ್ 12 ಮೂಲಕ ಯಾವುದೇ ಮತಗಟ್ಟೆಗೆ ಹೋಗಿ ಅಲ್ಲಿ ಪ್ರಮಾಣ ಪತ್ರ ತೋರಿಸಿ ಮತದಾನ ಮಾಡಬಹುದು. ಬೇರೆ ಜಿಲ್ಲೆಯಿಂದ ಬಂದವರಿಗೆ ಫಾರ್ಮ್ 12 ಎ ಪೋಸ್ಟಲ್ ಮತದಾನ ಪಕ್ರಿಯೆ ನಡೆಯಲಿದೆ. ಈ ಮತದಾನ ಪ್ರಕ್ರಿಯೆ ಏ.15ರ ಒಳಗೆ ಮುಗಿಸಬೇಕಾಗಿದೆ.
ಹಾಗಾಗಿ ಏ.13ರ ಒಳಗೆ ಚುನಾವಣಾ ಕರ್ತವ್ಯದಲ್ಲಿರುವವರು ಎಲ್ಲಾ ಫಾರ್ಮ್ 12 ಮತ್ತು 12 ಎ ಅನ್ನು ತಹಶೀಲ್ದಾರ್ ಕಚೇರಿಗೆ ನೀಡಬೇಕು. ಆಗ ನಾವು ಅದನ್ನು ಪರಿಶೀಲಿಸಿ ಎ.14ಕ್ಕೆ ನಾವು ಅದನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕಾಗಿದೆ. ಈಗಾಗಲೇ ಅಂದಾಜು ಪ್ರಕಾರ 1,06,418 ಪುರುಷರು, 1,10,257 ಮಹಿಳಾ ಮತದಾರರು ಇದ್ದಾರೆ. ಇದರ ಸರಿಯಾದ ಮಾಹಿತಿ ಶೀಘ್ರದಲ್ಲಿ ತಿಳಿಸಲಾಗುವುದು ಎಂದು ಸಹಾಯಕ ಚುನಾವಣಾಧಿಕಾರಿ ಜುಬಿನ್ ಮೊಹಪಾತ್ರ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ತಹಸೀಲ್ದಾರ್ ಕುಂಞ ಅಹಮ್ಮದ್, ಚುನಾವಣಾ ನೋಡೆಲ್ ಅಧಿಕಾರಿಯಾಗಿರುವ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಹನುಮ ರೆಡ್ಡಿ, ಹಿರಿಯ ನೋಡೆಲ್ ಅಧಿಕಾರಿ ಶಿವಶಂಕರ್ ದಾನೆಗೊಂಡ, ಉಪತಹಶೀಲ್ದಾರ್ ಸುಲೋಚನಾ ಉಪಸ್ಥಿತರಿದ್ದರು.