ದ್ವಾರಕೀಶ್ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಬೆಂಗಳೂರು: ಕನ್ನಡ ಚಿತ್ರರಂಗದ ಧೀಮಂತ ನಟ ನಿರ್ಮಾಪಕ, ನಿರ್ದೇಶಕ ಪ್ರಚಂಡ ಕುಳ್ಳ ದ್ವಾರಕೀಶ್ ಕಳೆದ ದಿನ ಅವರ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ದ್ವಾರಕೀಶ್ ಅವರ ನಿಧನದ ಸುದ್ದಿ ತಿಳಿದು ನಿನ್ನೆಯಿಂದಲೇ ಚಿತ್ರರಂಗದ ನಟ, ನಟಿಯರು, ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಎಕ್ಸ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ಮೋದಿಯವರು ತಮ್ಮ ಅಧಿಕೃತ ಎಕ್ಸ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದು, ಸಿನಿಮಾ ಕ್ಷೇತ್ರಕ್ಕೆ ಹಿರಿಯ ನಟ ದ್ವಾರಕೀಶ್ ಅವರ ಕೊಡುಗೆ ಅಪಾರ. ಅವರ ಅದ್ಭುತ ಅಭಿನಯವು ದಶಕಗಳ ಕಾಲ ಜನರನ್ನ ರಂಜಿಸಿ ಮನದಲ್ಲಿ ಇನ್ನು ಹಾಗೇ ಉಳಿದಿದೆ. ಸಿನಿಮಾ ಕಡೆಗೆ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಾಗೂ ಯುವ ನಟರಿಗೆ ಬೆಂಬಲ ಕೊಡುವಲ್ಲಿ ದ್ವಾರಕೀಶ್ ಮೊದಲಿಗರಾಗಿದ್ದರು. ಹೀಗಾಗಿಯೇ ಕನ್ನಡ ಚಿತ್ರರಂಗ ರೂಪಿಸುವಲ್ಲಿ ಅವರ ಬಹುಮುಖಿ ಪಾತ್ರವೂ ಒಂದು.
ಸದ್ಯ ಅವರ ನಿಧನದ ಸುದ್ದಿ ತಿಳಿದು ದುಃಖವಾಗಿದೆ. ಸಿನಿಮಾ ರಂಗದಲ್ಲಿ ಅವರ ಅಪೂರ್ವ ಪ್ರಯಾಣವನ್ನು ನಾವು ಸದಾ ಸ್ಮರಿಸುತ್ತೇವೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ದುಃಖ ತಡೆದುಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ನೀಡಲಿ ಎಂದು ಟ್ವಿಟರ್ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.