ಮಹತ್ವದ ತೀರ್ಪಿನಲ್ಲಿ ಇಡಿ ಕಾರ್ಯಗಳಿಗೆ ಕಡಿವಾಣ ಹೇರಿದ ಸುಪ್ರೀಂ ಕೋರ್ಟ್ !
ನವದೆಹಲಿ: ಅತ್ಯಂತ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಜಾರಿ ನಿರ್ದೇಶನಾಲಯದ ಕಾರ್ಯಗಳಿಗೆ ಕಡಿವಾಣ ಹೇರಿದೆ. ಯಾವುದೇ ವ್ಯಕ್ತಿ ವಿರುದ್ಧ ದಾಖಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣ ಅಥವಾ ಪಿಎಂಎಲ್ಎ ಕೇಸ್ಅನ್ನು ವಿಶೇಷ ಕೋರ್ಟ್ ಪರಿಗಣನೆ ಮಾಡಿದ ಮಾತ್ರಕ್ಕೆ ಆರೋಪಿಯನ್ನು ಜಾರಿ ನಿರ್ದೇಶನಾಲಯ ಹಾಗೂ ಏಜೆನ್ಸಿಯ ಅಧಿಕಾರಿಗಳು ಸೆಕ್ಷನ್ 19 ಪಿಎಂಎಲ್ಎ ಕಾಯ್ದೆಯ ಅಡಿಯಲ್ಲಿ ಅಧಿಕಾರ ಪ್ರಯೋಗಿಸಿ ಬಂಧನ ಮಾಡುವಂತಿಲ್ಲ ಎಂದು ತಿಳಿಸಿದೆ.
ಇಡಿ ಅಂತಹ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಳ್ಳಬೇಕು ಎಂದು ಬಯಸಿದರೆ, ಅವರು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದೆ. ಅದೇ ಅಪರಾಧಕ್ಕೆ ಸಂಬಂಧಿಸಿದಂತೆ ಇಡಿ ಹೆಚ್ಚಿನ ತನಿಖೆ ನಡೆಸಲು ಬಯಸಿದರೆ, ಈಗಾಗಲೇ ಸಲ್ಲಿಸಿದ ದೂರಿನಲ್ಲಿ ಆರೋಪಿ ಎಂದು ತೋರಿಸದ ವ್ಯಕ್ತಿಯನ್ನು ಸೆಕ್ಷನ್ 19 ರ ಅವಶ್ಯಕತೆಗಳನ್ನು ಪೂರೈಸಿದರೆ ಅದನ್ನು ಬಂಧಿಸಬಹುದು ಎಂದು ಪೀಠ ಹೇಳಿದೆ.
ಇನ್ನು ದೂರು ಸಲ್ಲಿಸುವವರೆಗೂ ಆರೋಪಿಯನ್ನು ಇಡಿ ಬಂಧಿಸದಿದ್ದರೆ, ವಿಶೇಷ ನ್ಯಾಯಾಲಯವು ದೂರಿನ ಪರಿಗಣನೆಗೆ ತೆಗೆದುಕೊಳ್ಳುವಾಗ, ಸಾಮಾನ್ಯ ನಿಯಮದಂತೆ, ಆರೋಪಿಗೆ ಸಮನ್ಸ್ ನೀಡಬೇಕೇ ಹೊರತು ವಾರಂಟ್ ಅಲ್ಲ. ಆರೋಪಿ ಜಾಮೀನಿನ ಮೇಲೆ ಇದ್ದರೂ ಸಮನ್ಸ್ ಜಾರಿ ಮಾಡಬೇಕು ಎಂದು ತಿಳಿಸಿದೆ.