‘ಕರಿಮಣಿ ಮಾಲಿಕ ನೀನಲ್ಲ’ ಟ್ರೆಂಡಿಂಗ್ ಅಂಗಳಕ್ಕೆ ಗುರುಕಿರಣ್ ಎಂಟ್ರಿ
ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ‘ಕರಿಮಣಿ ಮಾಲಿಕ ನೀನಲ್ಲ..’ ಎಂಬ ಸಾಲು ಸಿಕ್ಕಾಪಟ್ಟೆ ವೈರಲ್ ಆಗಿದೆ. ‘ಉಪೇಂದ್ರ’ ಚಿತ್ರದ ‘ಏನಿಲ್ಲ ಏನಿಲ್ಲ..’ ಹಾಡಿನ ನಡುವೆ ಬರುವ ಈ ಸಾಲುಗಳನ್ನು ಸಂಗೀತ ನಿರ್ದೇಶಕ ಗುರುಕಿರಣ್ ಅವರು ಈಗ ಗುನುಗಿದ್ದಾರೆ. 25 ವರ್ಷಗಳ ಹಿಂದಿನ ಹಾಡಿಗೆ ಜನರು ಈಗ ತೋರಿಸುತ್ತಿರುವ ಪ್ರೀತಿ ಕಂಡು ಅವರು ಫಿದಾ ಆಗಿದ್ದಾರೆ. ಇದೇ ಹಾಡಿನ ರಿಮಿಕ್ಸ್ ವರ್ಷನ್ ಕೂಡ ಈಗ ಸಖತ್ ಸೌಂಡು ಮಾಡುತ್ತಿದೆ.
‘ಉಪೇಂದ್ರ’ ಸಿನಿಮಾದಲ್ಲಿ ‘ಏನಿಲ್ಲ.. ಏನಿಲ್ಲ..’ ಗೀತೆಯನ್ನು ಹಾಡಿದ ಮೂಲ ಗಾಯಕಿ ಪ್ರತಿಮಾ ರಾವ್. ಈಗ ಗುರುಕಿರಣ್ ಅವರು ಈ ಗೀತೆಯ ಒಂದು ಸಾಲನ್ನು ಹಾಡಿದ್ದಾರೆ. ಅದನ್ನು ತಮ್ಮದೇ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘25 ವರ್ಷಗಳ ಹಿಂದೆ ಸಂಗೀತ ಸಂಯೋಜಿಸಿದ ಹಾಡು. ಈಗಲೂ ಅಷ್ಟೇ ಪ್ರೀತಿ ಇದೆ’ ಎಂದು ಗುರುಕಿರಣ್ ಅವರು ಕ್ಯಾಪ್ಷನ್ ನೀಡಿದ್ದಾರೆ. ಇದಕ್ಕೆ ಆನೇಕ ಸೆಲೆಬ್ರಿಟಿಗಳು ಕಮೆಂಟ್ ಮಾಡಿದ್ದಾರೆ.
ಇನ್ನು ಈ ಹಾಡಿನ ಬಗ್ಗೆ ಮಾತನಾಡಿರುವ ಅವರು, ‘ಅಂದಿನ ಕಾಲದಲ್ಲಿ ದಾಖಲೆ ಮೊತ್ತಕ್ಕೆ ಈ ಹಾಡು ಮಾರಾಟ ಆಗಿತ್ತು. ಈ ಹಾಡನ್ನು ಅಂದು ಜನರು ಕೇಳಿ ಸುಮ್ಮನಾಗಿದ್ದರು. ಈಗ ಮತ್ತೆ ಹಾಡು ಟ್ರೆಂಡ್ ಆಗುತ್ತಿದೆ. ಹಾಡಿಗೆ ಅಂದು ಏನು ಪ್ರಾಮುಖ್ಯತೆ ಸಿಗಬೇಕಿತ್ತು ಅದು ಈಗ ಸಿಗುತ್ತಿದೆ’ ಎಂದು ಸಂತೋಷ ಹೊರ ಹಾಕಿದ್ದಾರೆ.
ಗುರುಕಿರಣ್ ಮತ್ತು ಉಪೇಂದ್ರ ಅವರ ಕಾಂಬಿನೇಷನ್ನಲ್ಲಿ ಬಂದ ಹಾಡುಗಳು ಆ ಕಾಲದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದ್ದವು. ‘ಎ’, ‘ಉಪೇಂದ್ರ’ ಸಿನಿಮಾಗಳ ಆಡಿಯೋ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಮಾರಾಟ ಆಗಿದ್ದವು.ಅವು ಈಗಲೂ ತಮ್ಮ ಸ್ಥಾನ ಭದ್ರಪಡಿಸಿಕೊಂಡಿವೆ.