ಸ್ಕ್ರಾಪ್ ಗೋದಾಮಿಗೆ ಬೆಂಕಿ: ಎರಡು ಟ್ರಾಕ್ಟರ್, ಬೈಕ್ ಬೆಂಕಿಗಾಹುತಿ
ಬೆಂಗಳೂರು: ಸ್ಕ್ರಾಪ್ ಗೋದಾಮಿಗೆ ಬೆಂಕಿ ತಗುಲಿ ಧಗ ಧಗ ಹೊತ್ತಿ ಉರಿದ ಘಟನೆ ಪರಪ್ಪನ ಅಗ್ರಹಾರದ ಬಳಿ ಇಂದು ಮುಂಜಾನೆ 3 ಗಂಟೆ ಸುಮಾರಿಗೆ ನಡೆದಿದೆ.
ಸುಮಾರು ಐದು ಎಕರೆ ಪ್ರದೇಶದಲ್ಲಿರುವ ಗೋದಾಮು ಇದಾಗಿದ್ದು, ಮೊದಲು ಸಿಲಿಂಡರ್ ಸ್ಪೋಟದಿಂದ ಬೆಂಕಿ ಹೊತ್ತುಕೊಂಡಿದೆ. ನಂತರ ಶಾರ್ಟ್ ಸರ್ಕ್ಯೂಟ್ನಿಂದ ಇಡೀ ಗೋದಾಮಿಗೆ ವ್ಯಾಪಿಸಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿಗಾಹುತಿಯಾಗಿದೆ. ಇನ್ನು ಘಟನೆಯಲ್ಲಿ ಎರಡು ಟ್ರಾಕ್ಟರ್, ಒಂದು ಟಾಟಾ ಎಸ್ ಮತ್ತು ಬೈಕ್ ಬೆಂಕಿಗಾಹುತಿಯಾಗಿದೆ.
ಸ್ಥಳಕ್ಕೆ ಆಗಮಿಸಿದ ಸುಮಾರು ಎಂಟು ಅಗ್ನಿಶಾಮಕ ಠಾಣೆ ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆಸಲಾಗಿ, ಸತತ ಹತ್ತು ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ.
ಇದು ಅಕ್ರಮ ಸ್ಕ್ರಾಪ್ ಗೋದಾಮು ಆಗಿದ್ದು, ಇಲ್ಲಿ ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್, ರಬ್ಬರ್, ಕೆಮಿಕಲ್ ವಸ್ತುಗಳ ದಾಸ್ತಾನು ಮಾಡಲಾಗಿದೆ.
ಜೊತೆಗೆ ಬಾಂಗ್ಲಾ ವಲಸಿಗರ ಅಡ್ಡೆಯಾಗಿರುವ ಇಲ್ಲಿಗೆ ಅಕ್ರಮ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, ಹತ್ತಾರು ವರ್ಷಗಳಿಂದ ಆಕ್ರಮ ಸ್ಕ್ರಾಪ್ ಗೋದಾಮು ನಡೆಯುತ್ತಿದೆ. ಆದರೂ ಬಿಬಿಎಂಪಿ, ಪೊಲೀಸ್, ಬೆಸ್ಕಾಂ ಅಧಿಕಾರಿಗಳು ಕಂಡು ಕಾಣದಂತಿದ್ದಾರೆ.
ಕೂಡ್ಲು ಶ್ರೀನಿವಾಸ್ ರೆಡ್ಡಿ ಎಂಬುವವರಿಗೆ ಸೇರಿದ ಜಮೀನು ಇದಾಗಿದ್ದು, ಮೀಜಾನ್ ಎಂಬುವವನು ಸ್ಕ್ರಾಪ್ ಗೋದಾಮು ಅಕ್ರಮವಾಗಿ ನಡೆಸುತ್ತಿದ್ದ.