ಸೈಡ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಬಸ್ ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ
ಬಂಟ್ವಾಳ: ಕಾರಿನ ಚಾಲಕನಿಗೆ ಸೈಡ್ ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ಕೆ.ಎಸ್.ಆರ್.ಟಿ.ಸಿ. ಬಸ್ಸನ್ನು ತಡೆದು ಅದರ ಚಾಲಕನಿಗೆ ಹಲ್ಲೆ ನಡೆಸಿ, ಬಸ್ಸಿಗೆ ಹಾನಿಗೈದ ಘಟನೆ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ.
ಪುಂಜಾಲಕಟ್ಟೆ ನಿವಾಸಿ ಕೃಷ್ಣಪ್ಪ ಬಸ್ ಚಾಲಕನಾಗಿದ್ದು, ಹಲ್ಲೆ ಘಟನೆ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಸರ್ಕಾರಿ ಬಸ್ ಗೆ ಕಾರು ಅಡ್ಡಗಟ್ಟಿ ಜಖಂಗೊಳಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ತಂಡದ ಮೇಲೆ ಕಾನೂನು ಕ್ರಮಕ್ಕೆ ಕೃಷ್ಣಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ಮಂಗಳೂರಿನಿಂದ ಮಡಿಕೇರಿಯ ಸೋಮವಾರಪೇಟೆಗೆ ತೆರಳುತ್ತಿದ್ದ ಬಸ್, ಭಾನುವಾರ ಸಂಜೆ ಸುಮಾರು 4 ಗಂಟೆಗೆ ಬಂಟ್ವಾಳ ಕಳೆದು ದಾಸಕೋಡಿಗೆ ತಲುಪಿದಾಗ ಎರಡು ಕಾರುಗಳಲ್ಲಿ ಯುವಕರು ಅಡ್ಡಗಟ್ಟಿದ್ದಾರೆ. ಕೆ.ಎ.03 ಎಮ್ .ಕೆ.8149 ಮತ್ತು ಕೆ.ಎ.05 ಎ.ಎನ್.6722 ನೋಂದಣಿಯ ಕಾರುಗಳಲ್ಲಿ ಬಂದ ಆರು ಜನರು ಕಲ್ಲಡ್ಕ ಏಕಮುಖ ರಸ್ತೆಯಲ್ಲಿ ಮುಂದೆ ಹೋಗಲು ಸೈಡ್ ಕೊಟ್ಟಿಲ್ಲ ಎಂಬ ಆರೋಪ ಮಾಡಿ, ಬಸ್ಸನ್ನು ಅಡ್ಡಗಟ್ಟಿ ಬಸ್ ನ ಸೈಡ್ ಮಿರರನ್ನು ಕಲ್ಲಿನಿಂದ ಹೊಡೆದು ಜಖಂಗೊಳಿಸಿದ್ದಾರೆ.
ಚಾಲಕ ಕೃಷ್ಣಪ್ಪ ಅವರನ್ನು ಸೀಟಿನಿಂದ ಎಳೆದುಹಾಕಿ ಹಿಗ್ಗಾಮುಗ್ಗ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ. ಜೊತೆಗೆ ಬಸ್ ನ ಎದುರು ಭಾಗದ ಗಾಜನ್ನು ಕೈಯಿಂದ ಗುದ್ದಿ ಜಖಂ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.