ಸರ್ಕಾರದಿಂದಲೇ ಡಯಾಲಿಸಿಸ್ ವ್ಯವಸ್ಥೆ ನಿರ್ವಹಣೆ ಮಾಡುವ ಚಿಂತನೆಯಿದೆ: ಗುಂಡೂರಾವ್
ಮಂಗಳೂರು: ಡಯಾಲಿಸ್ ವ್ಯವಸ್ಥೆ ಬಗೆಗಿನ ಗೊಂದಲ ನಾನು ಆರೋಗ್ಯ ಸಚಿವ ಆಗುವ ಮೊದಲೇ ಇತ್ತು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರ ಎರಡು ಏಜೆನ್ಸಿಗೆ ಡಯಾಲಿಸಿಸ್ ನಿರ್ವಹಣೆ ಕೊಟ್ಟಿತ್ತು, ಅದರಲ್ಲಿ ಒಂದು ಏಜೆನ್ಸಿ ಅರ್ಧದಲ್ಲೇಯೇ ನಿರ್ವಹಣೆ ಬಿಟ್ಟಿದ್ದರು. ಅಲ್ಲದೆ ಏಜೆನ್ಸಿ ನಿರ್ವಹಣೆ ಸಮರ್ಪಕವಾಗಿರಲಿಲ್ಲ, ಸಿಬ್ಬಂದಿಗೆ ಸಂಬಳ ಸರಿಯಾಗಿ ಕೊಡುತ್ತಿರಲಿಲ್ಲ. ಇಎಸ್ಸೈ, ಪಿಎಫ್ ಕಟ್ಟಿರಲಿಲ್ಲ. ಇದೀಗ ರಾಜ್ಯ ಸರ್ಕಾರ ಆ ಹಣ ಕಟ್ಟಲು ಚಿಂತನೆ ನಡೆಸಿದೆ.
ಆದರೆ ಅದಕ್ಕೆ ಮೊದಲು ಆ ಏಜೆನ್ಸಿಯನ್ನು ಬ್ಲಾಕ್ ಲಿಸ್ಟ್ಗೆ ಹಾಕುವ ಕೆಲಸವಾಗುತ್ತಿದೆ. ಜೊತೆಜೊತೆಗೆ ನಾಲ್ಕು ವಿಭಾಗದಲ್ಲಿ ಹೊಸ ಏಜೆನ್ಸಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ.
ಡಯಾಲಿಸ್ ಯಂತ್ರ ಕೆಟ್ಟು ಹೋದಲ್ಲಿ ಬದಲಾಯಿಸಲು ಆಗುತ್ತಿಲ್ಲ. ಅದನ್ನು ಈಗಿರುವ ಏಜೆನ್ಸಿ ಮಾಡಬೇಕು, ಅಥವಾ ಹೊಸ ಏಜೆನ್ಸಿ ಬಂದ ಬಳಿಕ ಮಾಡಬೇಕು. ಯಾವುದೂ ಆಗದೇ ಇದ್ದಲ್ಲಿ ಸರ್ಕಾರವೇ ನಿರ್ವಹಣೆ ಮಾಡೋ ಬಗ್ಗೆ ಚಿಂತನೆ ಇದೆ ಎಂದು ಹೇಳಿದರು. ಸರ್ಕಾರವೇ ಮೆಷಿನ್ ಖರೀದಿಸಿ ನಿರ್ವಹಣೆ ಮಾಡಲು ಚಿಂತಿಸಿದೆ. ಟೆಂಡರ್ ಪ್ರಕ್ರಿಯೆ ಮುಗಿಯಲಿ, ಆ ಬಳಿಕ ಇದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಡಯಾಲಿಸಸ್ ಸಿಬ್ಬಂದಿಯ ಬಗ್ಗೆ ನಮಗೆ ಕಾಳಜಿ ಇದೆ.ಅವರಿಗೆ ಯಾವುದೇ ಸಮಸ್ಯೆ ಆಗದಂತೆ ನಾವು ನೋಡಿಕೊಳ್ತೇವೆ ಎಂದು ತಿಳಿಸಿದರು.
ನೈತಿಕ ಪೊಲೀಸ್ ಗಿರಿಗೆ ಕಟ್ಟು ನಿಟ್ಟಿನ ಕ್ರಮ: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಹೆಚ್ಚಳ ವಿಚಾರ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದೇವೆ. ಯಾರೂ ಕಾನೂನು ಕೈಗೆತ್ತಿಕೊಳ್ಳದಂತೆ ತಡೆಯಲು ಹೇಳಿದ್ದೇವೆ. ಕೋಮುವಾದ, ನೈತಿಕ ಪೊಲೀಸ್ ಗಿರಿ ಅಗತ್ಯ ಇಲ್ಲ. ಜನರಿಗೆ ಜೀವನ ನಡೆಸಲು ಅಭಿವೃದ್ಧಿ ಬೇಕು, ಅದಷ್ಟೇ ಈಗಿನ ಅಗತ್ಯ. ಪ್ರಜಾಪ್ರಭುತ್ವದಲ್ಲಿ ಬೇರೆ ಏನೂ ಮಾಡಲು ಅವಕಾಶ ಇಲ್ಲ ಎಂದು ಹೇಳಿದರು.