ಹನುಮಾನ್ ಸಿನಿಮಾ ಒಂದು ಮಾಸ್ಟರ್ಪೀಸ್: ಸಚಿವ ಅನುರಾಗ್ ಠಾಕೂರ್
ಬೆಂಗಳೂರು: ತೆಲುಗಿನ ತೇಜ ಸಜ್ಜಾ ಅಭಿನಯದ ‘ಹನುಮಾನ್’ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 12ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಯಿತು.
ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಕೂಡ ‘ಹನುಮಾನ್’ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.
ಶಿವರಾಜ್ಕುಮಾರ್, ನಂದಮೂರಿ ಬಾಲಕೃಷ್ಣ ಅವರ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಹ ‘ಹನುಮಾನ್’ ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದಾರೆ.
‘ಹನುಮಾನ್’ ಚಿತ್ರತಂಡದವರು ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದ ಫೋಟೋವನ್ನು ಅನುರಾಗ್ ಠಾಕೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ನಮ್ಮ ಸನಾತನ ಧರ್ಮದ ಕುರಿತಾಗಿ ಇರುವ ಹನುಮಾನ್ ಸಿನಿಮಾ ಒಂದು ಮಾಸ್ಟರ್ಪೀಸ್. ಸಿನಿಮಾದ ಗ್ರಾಫಿಕ್ಸ್ ತುಂಬ ಚೆನ್ನಾಗಿದೆ. ಚಿತ್ರತಂಡದ ಶ್ರಮ ಎದ್ದು ಕಾಣುತ್ತಿದೆ. ಈ ತಂಡಕ್ಕೆ ನಾನು ಮೆಚ್ಚುಗೆ ಸೂಚಿಸುತ್ತೇನೆ. ನಿರ್ದೇಶಕ ಪ್ರಶಾಂತ್ ವರ್ಮಾ, ನಟ ತೇಜ ಸಜ್ಜಾ, ನಿರ್ಮಾಪಕ ನಿರಂಜನ್ ರೆಡ್ಡಿ ಹಾಗೂ ತಂಡದವರು ಅತ್ಯುತ್ತಮ ಸಿನಿಮಾ ಮಾಡಿದ್ದಾರೆ’ ಎಂದು ಅನುರಾಗ್ ಠಾಕೂರ್ ಪೋಸ್ಟ್ ಮಾಡಿದ್ದಾರೆ.