ಎಚ್.ಡಿ.ರೇವಣ್ಣ ಇಂದು ಜೈಲಿನಿಂದ ಬಿಡುಗಡೆ; ಸಂತಸ ಪಡುವ ಸಮಯವಲ್ಲ ಎಂದ ಹೆಚ್ಡಿಕೆ
ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಕಳೆದ ದಿನ ಜಾಮೀನು ಪಡೆದಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ನ್ಯಾಯಾಂಗ ಬಂಧನದಿಂದ ಇಂದು ಬಿಡುಗಡೆಯಾಗಲಿದ್ದಾರೆ.
ನಿನ್ನೆ ಸಂಜೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ನ್ಯಾಯಾಲಯದ ಆದೇಶ ಪ್ರಕ್ರಿಯೆಯನ್ನು ನಿನ್ನೆ ಸಂಜೆ 7 ಗಂಟೆಯೊಳಗೆ ಜೈಲಿನ ಅಧಿಕಾರಿಗಳಿಗೆ ತಲುಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರೇವಣ್ಣ ಅವರು ಬಿಡುಗಡೆಯಾಗಲಿಲ್ಲ.
ಇಂದು ಬೆಳಿಗ್ಗೆ ರೇವಣ್ಣರ ಪರ ವಕೀಲರು ಆದೇಶದ ಪ್ರತಿ ಪಡೆದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ತಲುಪಿಸಿ ಜಾಮೀನು ಪ್ರಕ್ರಿಯೆಗಳನ್ನು ಪೂರೈಸಿದ ನಂತರ ರೇವಣ್ಣ ಅವರ ಬಿಡುಗಡೆ ಇಂದು ಮಧ್ಯಾಹ್ನ ಅಥವಾ ಸಂಜೆಯಾಗಲಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್ ಡಿ ಕುಮಾರಸ್ವಾಮಿ ಅವರು, ರೇವಣ್ಣಗೆ ಜಾಮೀನು ಸಿಕ್ಕಿದೆ ಎಂದು ಸಂಭ್ರಮಿಸುವುದು ಬೇಡ.ಇದು ಸಂತಸಪಡಿವ ಸಮಯವಲ್ಲ. ರಾಜ್ಯದಲ್ಲಿ ಹೀನಾಯ ಘಟನೆ ನಡೆದಿದೆ. ರಾಜ್ಯವೇ ತಲೆ ತಗ್ಗಿಸುವ ಘಟನೆ ಇದು. ನಮಗೆ ಜನ್ಮ ಕೊಟ್ಟ ತಂದೆ-ತಾಯಿ ಇದ್ದಾರೆ. ಒಡಹುಟ್ಟಿದವರಿದ್ದಾರೆ. ಎಸ್ಐಟಿ ಈವರೆಗೂ ಪೆನ್ ಡ್ರೈವ್ ಪ್ರಕರಣ ಟಚ್ ಮಾಡಿಲ್ಲ. ಪೆನ್ ಡ್ರೈವ್ ಹಂಚಿದವರ ವಿರುದ್ಧ ಈವರೆಗೂ ಕ್ರಮ ಕೈಗೊಂಡಿಲ್ಲ. ರಾಜ್ಯ ಸರ್ಕಾರಕ್ಕೆ ಸಂತ್ರಸ್ತರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಎಂಬುದು ಇದೆಯೇ? ಎಂದು ಪ್ರಶಿಸಿದ್ದಾರೆ.