ತಲೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಗೆಳೆಯನಿಂದಲೇ ಕೊಲೆ
ಬೆಂಗಳೂರು: ಮದ್ಯ ಸೇವನೆಗೆಂದು ಕರೆದೊಯ್ದು ಕೊಲೆ ಮಾಡಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಜೇಂದ್ರ (32) ಕೊಲೆಯಾದ ದುರ್ದೈವಿ. ಸಂತೋಷ್ ಕೊಲೆ ಮಾಡಿರುವ ಆರೋಪಿ. ಜೊತೆಯಲ್ಲಿ ಎಣ್ಣೆ ಹೊಡೆದ ಗೆಳೆಯನೇ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ.
ಯಲಹಂಕ ಡೈರಿ ಸರ್ಕಲ್ ಹತ್ತಿರದ ಬಿಂದಾಸ್ ಬಾರ್ ನಲ್ಲಿ ಕೃತ್ಯ ನಡೆದಿದೆ. ಕೆಲಸದಿಂದ ತೆಗೆಯಲು ಮೃತ ಗಜೇಂದ್ರನೇ ಕಾರಣವೆಂದು ತಲೆ ಮೇಲೆ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಮೃತ ಗಜೇಂದ್ರ ಹಾಗೂ ಆರೋಪಿ ಸಂತೋಷ್ ಇಬ್ಬರು ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಚಿಕ್ಕಬೊಮ್ಮಸಂದ್ರದ ತಿರುಪತಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು.
ಈ ವೇಳೆ ಮೃತ ಗಜೇಂದ್ರ ಹಾಗೂ ಸಂತೋಷ್ ಇಬ್ಬರಿಗೂ ಜಗಳವಾಗಿತ್ತು. ಇಬ್ಬರ ಜಗಳದಿಂದ ಬೇಸತ್ತು ಆರೋಪಿ ಸಂತೋಷನನ್ನು ಕೆಲಸದಿದ್ದ ಹೋಟೆಲ್ ಮಾಲೀಕ ತೆಗೆದಿದ್ದನು. ಕೆಲಸ ಹೋಗಲಿಕ್ಕೆ ಗಜೇಂದ್ರನೇ ಕಾರಣನೆಂದು ಸಂತೋಷ್ ಕೋಪಿಸಿಕೊಂಡಿದ್ದನು.
ನಿನ್ನೆ ಸಂಜೆ ಗಜೇಂದ್ರನನ್ನು ಭೇಟಿ ಮಾಡಲು ಮನೆ ಬಳಿ ಸಂತೋಷ್ ಬಂದಿದ್ದನು. ನಂತರ ಮದ್ಯ ಸೇವನೆಗೆ ಗಜೇಂದ್ರನನ್ನು ಬಾರ್ಗೆ ಕರೆದೊಯ್ದಿದ್ದನು. ಎಣ್ಣೆ ಹೊಡೆದು ಟೈಟ್ ಆದ ನಂತರ ಬಾರ್ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ಕೂತಿದ್ದರು. ಆಗ ತಲೆ ಮೇಲೆ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ನೇಪಾಳ ಮೂಲದ ಮೃತ ಗಜೇಂದ್ರ ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದನು. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.