ಶಿವಮೊಗ್ಗದಲ್ಲಿ ₹100 ಕೋಟಿಯ ಹೈಸೆಕ್ಯೂರಿಟಿ ಜೈಲು ನಿರ್ಮಾಣ: ಸಿಎಂ ಘೋಷಣೆ
ಬೆಂಗಳೂರು: ಇನ್ಮುಂದೆ ಜಾತಿ, ಧರ್ಮ, ಭಾಷೆಯ ಹೆಸರಲ್ಲಿ ಗಲಭೆ ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದ್ದು 100 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಸೆಕ್ಯೂರಿಟಿ ಕಾರಾಗೃಹ (ಜೈಲು)ವನ್ನು ಶಿವಮೊಗ್ಗದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಬಜೆಟ್ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
15ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರು, ಜಾತಿ, ಧರ್ಮ, ಭಾಷೆಯ ಹೆಸರಲ್ಲಿ ಗಲಭೆ ಮಾಡಿದ್ರೆ ಇನ್ಮುಂದೆ ಕಠಿಣ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ಬಜೆಟ್ನಲ್ಲಿ ಹೊಸ ಘೋಷಣೆ ಮಾಡಿದೆ. ಸಮಾಜದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಶಿವಮೊಗ್ಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಹೈಸೆಕ್ಯೂರಿಟಿ ಕಾರಾಗೃಹ ನಿರ್ಮಾಣ ಮಾಡಲಾಗುತ್ತದೆ. ಐ.ಟಿ.ಬಿ.ಟಿ ಇಲಾಖೆಯ ಸಹಯೋಗದಲ್ಲಿ ತನಿಖಾ ತಂಡ ರಚನೆ ಮಾಡಲಾಗುವದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದರ ಜೊತೆಗೆ ರಾಜ್ಯದಲ್ಲಿನ ಸೈಬರ್ ಕ್ರೈಂ ವಿಭಾಗಗಳನ್ನ ಬಲಪಡಿಸಲು 43 ಸಿ.ಇ.ಎನ್ ಠಾಣೆ ಉನ್ನತಿಕರಣ ಮಾಡಲಾಗುತ್ತದೆ. ಪೊಲೀಸ್ ಗೃಹ 2025 ಯೋಜನೆಯಡಿ 800 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದಲ್ಲಿ 2,956 ವಸತಿ ಗೃಹಗಳ ನಿರ್ಮಾಣ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತದೆ. 2024-25ನೇ ಸಾಲಿನಲ್ಲಿ 200 ಕೋಟಿ ರೂ.ಗಳ ಅನುದಾನ ನೀಡಲಾಗುತ್ತದೆ ಎಂದು ಹೇಳಿದರು.
ಇನ್ನು ₹30 ಕೋಟಿ ವೆಚ್ಚದಲ್ಲಿ ವಿವಿಧ ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣ, ವಿಧಿ ವಿಜ್ಞಾನ, ಪ್ರಯೋಗಾಲಯ, ಮೊಬೈಲ್ ಫೋರೆನ್ಸಿಕ್ ಲ್ಯಾಬ್, ಆಡಿಯೋ ವಿಭಾಗಗಳ ಬಲಪಡಿಸಲು 10 ಕೋಟಿ ರೂ. ಅನುದಾನ, ಉಪಕರಣ ಮತ್ತು ತಂತ್ರಾಶಗಳನ್ನ ಒದಗಿಸಲು ಅನುದಾನ ನೀಡಿಕೆ, ಭದ್ರತೆಗಾಗಿ 5 ಕೋಟಿ ರೂ. ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಾಂಶ, ಬ್ಯಾಗೇಜ್ ಸ್ಕ್ಯಾನರ್ ಮುಂತಾದ ಅಧುನಿಕ ಉಪಕರಣಗಳ ಖರೀದಿ, ಬೆಂಗಳೂರಿನ ಪೊಲೀಸ್ ಸುಲಿವನ್ ಮೈದಾನದ ಅಭಿವೃದ್ಧಿಗೆ ಪ್ಲಾನ್ ಹಾಗು ಮೈದಾನದಲ್ಲಿ 3 ಕೋಟಿ ವೆಚ್ಚದಲ್ಲಿ ಆಸ್ಟ್ರೋ ಟರ್ಫ್ ಹಾಕಿ ಪ್ರಾಂಗಣಕ್ಕೆ ಸರ್ಕಾರ ನಿರ್ಧರಿಸಿದೆ.