ಲಕ್ಷದ್ವೀಪದತ್ತ ಬಜೆಟ್ ಲಕ್ಷ್ಯ; ಮೂಲಸೌಕರ್ಯ ಅಧಿವೃದ್ಧಿಗೆ ಒತ್ತು
ನವದೆಹಲಿ: ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಿದ್ದಾರೆ. ಇದು ಅವರ ಆರನೇ ಬಜೆಟ್ ಆಗಿದ್ದು, ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಆಗಿದೆ. ಬೆಳಗ್ಗೆ ೧೧ಗಂಟೆಗೆ ಶುರುವಾದ ಬಜೆಟ್ ಮಂಡನೆ ಡಿಡಿ ನ್ಯೂಸ್ ನಲ್ಲಿ ನೇರಪ್ರಸಾರವಾಯಿತು.
ಇತ್ತೀಚೆಗೆ ಭಾರತ-ಮಾಲ್ಡೀವ್ಸ್ ಸಂಬಂಧ ಹಳಸಿದ್ದು, ಭಾರತೀಯ ಪ್ರವಾಸಿಗರು ಲಕ್ಷದ್ವೀಪದತ್ತ ಮುಖ ಮಾಡತೊಡಗಿದ್ದಾರೆ. ಈ ಹಿನ್ನಲೆಯಲ್ಲಿ ಅಲ್ಲಿನ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವತ್ತ ಸರ್ಕಾರ ಗಮನ ಹರಿಸಿದ್ದು, ಅದಕ್ಕಾಗಿ ಹಣ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇದರೊಂದಿಗೆ ಪ್ರವಾಸೋದ್ಯಮಕ್ಕೆ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ನೀಡಲಾಗುವುದು ಎಂದು ಅವರು ಘೋಷಿಸಿದರು.
ಬಡವರಿಗೆ ವಸತಿ ಸೌಲಭ್ಯ, ಹೊಸ ವೈದ್ಯಕೀಯ ಕಾಲೇಜುಗಳು, ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್, ೫ ಇಂಟಿಗ್ರೇಟೆಡ್ ಆಕ್ವಾ ಪಾರ್ಕ್ ಸ್ಥಾಪನೆ, ಮೀನುಗಾರಿಕಾ ಯೋಜನೆಗಳಿಗೆ ಉತ್ತೇಜನ, ಲಖ್ಪತಿ ದೀದಿ ಯೋಜನೆ, ಮೆಟ್ರೋ ವಿಸ್ತರಣೆ, ಕಿಸಾನ್ ಸಂಪದ ಯೋಜನೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್, ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ, ಸೋಲಾರ್ ಸಂಪರ್ಕ, ನೇರ ನಗದು ವರ್ಗಾವಣೆ ಇತ್ಯಾದಿ ವಿಷಯಗಳನ್ನು ಬಜೆಟ್ ಒಳಗೊಂಡಿತ್ತು.