ಬೆಂಗಳೂರಿನಿಂದ ಮಹಾರಾಷ್ಟ್ರ ಗಡಿವರೆಗೆ ಜನಜಾಗೃತಿ ಪಾದಯಾತ್ರೆ
ಬೆಂಗಳೂರು: ಹರಿಯಾಣ, ಮದ್ಯಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲಿಯೂ ಮೀಸಲಾತಿ ಜಾರಿಗೊಳಿ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಬಜೆಟ್ ನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳೊಂದಿಗೆ ಬೆಂಗಳೂರಿನಿಂದ ಮಹಾರಾಷ್ಟ್ರ ಗಡಿವರೆಗೆ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಸಿ, ಎಸ್.ಟಿ ಅಲೆಮಾರಿ ವಿಮುಕ್ತ ಬುಡಕಟ್ಟು ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಆದರ್ಶ್ ಎಲ್ಲಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಮುಖ್ಯವಾಹಿನಿಯಿಂದ ದೂರ ಉಳಿದಿರುವ 74 ಅಲೆಮಾರಿ, ಅರೆ ಅಲೆಮಾರಿ ಹಾಗೂ ವಿಮುಕ್ತ ಬುಟಕಟ್ಟು ಸಮುದಾಯಗಳನ್ನು ಗುರುತಿಸಿ ಅವರ ಅಭಿವೃದ್ಧಿಗಾಗಿ 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ದೇಶದಲ್ಲೆ ಪ್ರಥಮ ಭಾರಿಗೆ 120 ಕೋಟಿ ವಿಶೇಷ ಪ್ಯಾಕೇಜ್ ನೀಡಿ ಎಸ್ಸಿ, ಎಸ್ಟಿ ಅಲೆಮಾರಿಗಳ ಅಭಿವೃದ್ಧಿಗಾಗಿ ಕೋಶ ರಚನೆ ಮಾಡಿದರು. ಆದರೆ ಈ ಕೋಶದ ಉದ್ದೇಶ ಸಾಕಾರಗೊಳ್ಳುತ್ತಿಲ್ಲ. ಮತ್ತೆ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಅವರು ನಮ್ಮ ಸಮಸ್ಯೆಗಳ ಈಡೇರಿಕೆಗಾಗಿ ಎರಡು ಬಾರಿ ಸಭೆ ನಡೆಸಿದರು. ಆದರೆ ಈ ವರೆಗೆ ಒಂದು ಪೈಸೆ ಸಹ ಅನುದಾನ ಬಿಡುಗಡೆಯಾಗದ ಕಾರಣ ಅಲೆಮಾರಿಗಳ ಕನಸುಗಳು ಕನಸಾಗಿಯೇ ಉಳಿದಿವೆ ಎಂದ ಎಂದರು.
ಕಾರ್ಯಾಧ್ಯಕ್ಷರು ವೆಂಕಟೇಶ್ ದೊರ, ಮಹಿಳಾ ಘಟಕದ ಅಧ್ಯಕ್ಷರಾದ ಪಲ್ಲವಿ ಜಿ ಅವರು ಮಾತನಾಡಿ, ನೆಲೆ ಇಲ್ಲದ ಅಲೆಮಾರಿಗಳಿಗೆ ಸಾಮೂಹಿಕ ನೀರಾವರಿ ವ್ಯವಸ್ಥೆ ಕಲ್ಪಿಸಿ ಭೂ ಒಡೆತನ ಯೋಜನೆ ಅಡಿ ಭೂಮಿ ಹಂಚಿಕೆ ನೆಲೆ ನಿಲ್ಲಲು ಕ್ರಮಕೈಗೊಂಡು ಸಾಮಾಜಿಕವಾಗಿ ಮುನ್ನೆಲೆಗೆ ಬರಲು ಸಾಧ್ಯ. ಜಾತಿ ಪ್ರಮಾಣ ಪತ್ರಗಳ ಸಮಸ್ಯೆ ನಿವಾರಿಸುವ ಜೊತೆಗೆ ಸಮುದಾಯದ ಸಾಸ್ಕೃತಿಕ ಕಲಾ ಪರಂಪರೆ ರಕ್ಷಣೆಗಾಗಿ “ಶಾಶ್ವತ ಅಲೆಮಾರಿ ಆಯೋಗ” ರಚನೆ ಮಾಡಬೇಕೆಂದು ಆಗ್ರಹಿಸಿದರು.
ಎಕೆಎಂಎಸ್ ರಾಜ್ಯಾಧ್ಯಕ್ಷರಾದ ಶಿವಾನಂದ ಭಜಂತ್ರಿ ಮಾತನಾಡಿ, ಸೂರಿಲ್ಲದವರಿಗೆ ಕನಿಷ್ಠ ಐದು ಲಕ್ಷ ರೂ ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಬಜೆಟ್ ನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡಬೇಕು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಬಸವರಾಜು ನಾರಯಣಕರ, ರಾಜ್ಯ ಜಂಟಿ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ ಮತ್ತಿತರರು ಭಾಗವಹಿಸಿದ್ದರು.