ಬಿಜೆಪಿಯತ್ತ ಮುಖ ಮಾಡಿದ ಹೈಕೋರ್ಟ್ ಜಡ್ಜ್ ಗಂಗೋಪಾಧ್ಯಾಯ
ಕೋಲ್ಕತಾ: ಇಂದು ರಾಜೀನಾಮೆ ನೀಡಿರುವ ಕಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಅಭಿಜಿತ್ ಗಂಗೋಪಾಧ್ಯಾಯ್ ಅವರು ನಿರೀಕ್ಷೆಯಂತೆ ಬಿಜೆಪಿ ಸೇರಲಿದ್ದಾರೆ. ತಾನು ಬಿಜೆಪಿ ಸೇರಲಿರುವ ನಿರ್ಧಾರವನ್ನು ಸ್ವತಃ ಅಭಿಜಿತ್ ಅವರೇ ಪ್ರಕಟಿಸಿದ್ದಾರೆ.
ಇಂದು ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿಎಸ್ ಶಿವಜ್ಞಾನಂ ಅವರಿಗೆ ಕಳುಹಿಸಿದ್ದಾರೆ. ವೈಯಕ್ತಿಕ ಕಾರಣಗಳಿಗೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಮಾರ್ಚ್ 7ರಂದು ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ.
ರಾಜೀನಾಮೆ ಕೊಟ್ಟ ಬಳಿಕ ಇಂದು ಸಂಜೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಭಿಜಿತ್ ಗಂಗೋಪಾಧ್ಯಾಯ್, ಅವರು ತಮ್ಮ ಭವಿಷ್ಯದ ದಾರಿ ಬಗ್ಗೆ ಎದ್ದಿದ್ದ ಪುಕಾರುಗಳಿಗೆ ತೆರೆ ಎಳೆದಿದ್ದಾರೆ. ತಾನು ಬಿಜೆಪಿ ಸೇರಲು ಪ್ರಧಾನಿ ಮೋದಿ ಅವರ ನಾಯಕತ್ವ ಕಾರಣ. ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಶ್ರಮಜೀವಿ. ಈ ದೇಶಕ್ಕೆ ಏನಾದರೂ ಮಾಡಲು ಯತ್ನಿಸುತ್ತಿದ್ದಾರೆ. ಟಿಎಂಸಿ, ಕಾಂಗ್ರೆಸ್ಗಿಂತ ಬಿಜೆಪಿ ಉತ್ತಮ ಎನಿಸಿದೆ ಎಂಬುದನ್ನು ತಿಳಿಸಿದ್ದಾರೆ.