‘ಕಾಟೇರ’ ಸಿನಿಮಾಗೆ ಪೈರಸಿ ಕಾಟ: ಓರ್ವನ ಬಂಧನ
ರಾಯಚೂರು: ನಟ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾಗೆ ಪೈರಸಿ ಕಾಟ ಶುರುವಾಗಿದೆ. ಕೆಲವು ಕಿಡಿಗೇಡಿಗಳು ಈ ಸಿನಿಮಾದ ಪೈರಸಿ ಕಾಪಿಯನ್ನು ಟಿಲಿಗ್ರಾಂ ಮೂಲಕ ಮಾರಾಟ ಮಾಡುತ್ತಿದ್ದಾರೆ ಎಂಬುದು ಗೊತ್ತಾಗಿದೆ.
ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೇವದುರ್ಗ ತಾಲೂಕಿನ ಗಂಗಾನಾಯಕ್ ತಾಂಡದ ಮೌನೇಶ್ ಎಂಬ ಯುವಕ 40 ರೂಪಾಯಿಗೆ ‘ಕಾಟೇರ’ ಸಿನಿಮಾದ ಪೈರಸಿ ಲಿಂಕ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ.
ಕಿಂಗ್ ಪಿನ್ ಆಗಿರುವ ಉಪೇಂದ್ರ ಎಂಬ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಾಪಿ ರೈಟ್ ಆ್ಯಕ್ಟ್ ಮತ್ತು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ
‘ವಾಟ್ಸ್ ಆಪ್’ ಮೂಲಕ ಚಾಟ್ ಮಾಡಿ 40 ರೂಪಾಯಿ ಫೋನ್ ಪೇ ಮಾಡಿ ಸಿನಿಮಾದ ಲಿಂಕ್ ಪಡೆದಿದ್ದ ವಾದಿರಾಜ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇತ್ತೀಚೆಗೆ ‘ಕಾಟೇರ’ ಸಿನಿಮಾದ ಸಕ್ಸಸ್ ಮೀಟ್ ನಡೆಯಿತು. ಆ ಸಂದರ್ಭದಲ್ಲಿ ದರ್ಶನ್ ಅವರು ಪೈರಸಿ ಮಾಡುವವರಿಗೆ ಎಚ್ಚರಿಕೆ ನೀಡಿದ್ದರು.