ಬೆಂಗಳೂರಿನಲ್ಲಿ ಏ.23 ರಂದು ಕರಗ ಮಹೋತ್ಸವ: ಮದ್ಯ ನಿಷೇಧ
ಬೆಂಗಳೂರು: ಇಲ್ಲಿ ಐತಿಹಾಸಿಕ ಕರಗ ಮಹೋತ್ಸವ ಏ.23 ರಂದು ನಡೆಯಲಿದ್ದು, ಈ ಹಿನ್ನಲೆ ಮುನ್ನೆಚ್ಚರಿಕೆ ಸಲುವಾಗಿ 23ರ ಬೆಳಗ್ಗೆ 6 ರಿಂದ ಏ. 24 ಬೆಳಗ್ಗೆ 10 ಗಂಟೆಯವರೆಗೆ ಬೆಂಗಳೂರಿನ ನಾಲ್ಕು ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಈ ಬಾರಿಯೂ ಪೂಜಾರಿ ಎ.ಜ್ಞಾನೇಂದ್ರ ಅವರು ಕರಗ ಹೊರಲಿದ್ದಾರೆ. ಈ ಮೂಲಕ ಜ್ಞಾನೇಂದ್ರ ಅವರು 14ನೇ ಬಾರಿ ಬೆಂಗಳೂರು ಕರಗ ಹೊರುತ್ತಿದ್ದಾರೆ.
ಕರಗ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗಿಯಾಗುತ್ತಾರೆ. ಈ ವೇಳೆ ಕೆಲವು ಕಿಡಿಗೇಡಿಗಳು ಮದ್ಯದ ಅಮಲಿನಲ್ಲಿ ಕಾನೂನು ಬಾಹಿರ ಕೃತ್ಯ ಎಸಗುವ ಸಾಧ್ಯತೆ ಹೆಚ್ಚಿದ್ದು, ಈ ಕಾರಣದಿಂಗಿ ಮದ್ಯ ನಿಷೇಧದ ಕ್ರಮ ಕೈಗೊಳ್ಳಲಾಗಿದೆ.
ಹಲಸೂರು ಗೇಟ್, ಎಸ್ಆರ್ ನಗರ, ವಿಲ್ಸನ್ ಗಾರ್ಡನ್, ಎಸ್ ಜೆ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮಾಡುವಂತೆ ಕಮೀಷನರ್ ದಯಾನಂದ ಅವರು ಆದೇಶ ಹೊರಡಿಸಿದ್ದಾರೆ.
ಕರಗವು ದ್ರೌಪದಿಯನ್ನು ಸರ್ವೋತ್ಕೃಷ್ಟ ಮಹಿಳೆ ಎಂದು ಚಿತ್ರಿಸುತ್ತದೆ ಮತ್ತು ಅವಳನ್ನು ಶಕ್ತಿ ದೇವತೆ ಎಂದು ಗೌರವಿಸುತ್ತದೆ. ಕರಗವನ್ನು ಹೊರುವವರು ಮಹಿಳೆಯಂತೆ ಅಲಂಕಾರ ಮಾಡಿಕೊಳ್ಳಬೇಕು.
ಕಂಕಣ, ಮಂಗಳ-ಸೂತ್ರ, ಹಣೆಯ ಮೇಲೆ ಸಿಂಧೂರ ಇಟ್ಟುಕೊಂಡು ಮುತೈದೆಯಂತೆ ಕಾಣಬೇಕು. ಈ ರೀತಿ ಅಲಂಕಾರ ಮಾಡಿಕೊಂಡೇ ಕರಗವನ್ನು ಹೊರುವ ಸಂಪ್ರದಾಯ.