ಇನ್ಮುಂದೆ ಆರ್ಸಿಬಿಗೆ ಕೆಎಲ್ ರಾಹುಲ್ ನಾಯಕ !
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಕೊನೆಯ ಹಂತದಲ್ಲಿದೆ. ಇದರ ಬೆನ್ನಲ್ಲೇ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳು ಕೂಡ ಹರಿದಾಡಲಾರಂಭಿಸಿದೆ.
ಇಂತಹದೊಂದು ಸುದ್ದಿ ಹುಟ್ಟಿಕೊಳ್ಳಲು ಮುಖ್ಯ ಕಾರಣ ಕೆಎಲ್ ರಾಹುಲ್ ಅವರನ್ನು ಇತ್ತೀಚೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕರಾದ ಸಂಜಯ್ ಗೊಯೆಂಕಾ ತರಾಟೆಗೆ ತೆಗೆದುಕೊಂಡಿದ್ದು.
ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಹೀನಾಯ ಸೋಲನುಭವಿಸುತ್ತಿದ್ದಂತೆ ಮೈದಾನಕ್ಕೆ ಆಗಮಿಸಿದ ಸಂಜಯ್ ಗೊಯೆಂಕಾ ಕೆಎಲ್ ರಾಹುಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಭಾರೀ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ರಾಹುಲ್ ಎಲ್ಎಸ್ಜಿ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿದ್ದವು. ಅಲ್ಲದೇ ಅ ಸಮಯದಲ್ಲಿ ಕೆಎಲ್ ರಾಹುಲ್ ಆರ್ ಸಿಬಿಗೆ ಸೇರಲಿ ಎಂದು ಆರ್ಸಿಬಿ ಅಭಿಮಾನಿಗಳು ಕೇಳಿಕೊಂಡಿದ್ದರು.
ಇದೀಗ ಈ ಸುದ್ದಿಯು ಮತ್ತೊಂದು ಮಜಲಿನತ್ತ ಸಾಗುತ್ತಿದೆ. ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗುಡ್ ಬೈ ಹೇಳುವುದು ಖಚಿತ, ಅಲ್ಲದೆ ಮುಂದಿನ ಸೀಸನ್ನಲ್ಲಿ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಏಕೆಂದರೆ ಐಪಿಎಲ್ ಸೀಸನ್ 18 ಗಾಗಿ ಮೆಗಾ ಹರಾಜು ನಡೆಯಲಿದ್ದು, ಈ ಹರಾಜಿನಲ್ಲಿ ರಾಹುಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಕೆಎಲ್ ರಾಹುಲ್ ಖರೀದಿಗೆ ಆರ್ಸಿಬಿ ಮುಂದಾಗಲಿದೆ. ಏಕೆಂದರೆ ಈ ಹಿಂದೆ ಆರ್ಸಿಬಿ ಪರ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ಈ ಬಾರಿಯ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಆರ್ಸಿಬಿ ತಂಡದಲ್ಲೂ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗ್ತಿದೆ.
ಅದರಂತೆ ಐಪಿಎಲ್ 2025 ರಲ್ಲಿ ಕೆಎಲ್ಆರ್ ಆರ್ಸಿಬಿಗೆ ಬಂದರೆ ಕ್ಯಾಪ್ಟನ್ ಪಟ್ಟದೊಂದಿಗೆ ಕಣಕ್ಕಿಳಿಯುವುದು ಖಚಿತ ಎನ್ನಲಾಗ್ತಿದೆ.