'ಹಣಕ್ಕಿಂತ ನಿಯತ್ತು ಮುಖ್ಯ': ಎದುರಾಳಿಯ 20 ಕೋಟಿ ಆಫರ್ ತಿರಸ್ಕರಿಸಿದ ಕೊಹ್ಲಿ
ಮುಂಬೈ: 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿಗೆ ದಿನಗಣನೆ ಆರಂಭವಾಗಿದೆ. ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ ಆಟಗಾರರ ಹರಾಜು ನಡೆಯಲಿದೆ. ಎಲ್ಲರ ಚಿತ್ತ ಆಟಗಾರರ ಹರಾಜಿನ ಮೇಲೆ ನೆಟ್ಟಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಜೋಶ್ ಹೇಜಲ್ವುಡ್, ಹರ್ಷಲ್ ಪಟೇಲ್, ವನಿಂದು ಹಸರಂಗ ಸೇರಿದಂತೆ 11 ಆಟಗಾರರನ್ನು ರಿಲೀಸ್ ಮಾಡಿದೆ. ಈ ಮೂಲಕ ಹರಾಜಿಗೆ 40.75 ಕೋಟಿ ರುಪಾಯಿಗಳನ್ನು ಉಳಿಸಿಕೊಂಡಿತ್ತು.
ಇನ್ನು ಆರ್ಸಿಬಿ ಫ್ರಾಂಚೈಸಿಯು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಫಾಫ್ ಡು ಪ್ಲೆಸಿಸ್, ವಿಲ್ ಜೇಕ್ಸ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ ಅವರಂತಹ ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಉಳಿಸಿಕೊಳ್ಳುವ ಮೂಲಕ ಮುಂಬರುವ ಟೂರ್ನಿಗೆ ಮತ್ತೊಮ್ಮೆ ಬಲಿಷ್ಠ ತಂಡ ಕಟ್ಟಲು ಸಜ್ಜಾಗಿದೆ.
ಆರ್ಸಿಬಿ ಪಾಲಿನ ಆಪತ್ಭಾಂದವ ವಿರಾಟ್ ಕೊಹ್ಲಿ ಇದೀಗ ಸತತ 17ನೇ ಬಾರಿಗೆ ಬೆಂಗಳೂರು ತಂಡದಲ್ಲಿ ಆಡಲು ಸಜ್ಜಾಗಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ ಆರಂಭಿಕ ದಿನಗಳಲ್ಲಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸಾಕಷ್ಟು ಪರದಾಟ ನಡೆಸಿದ್ದರು. ಆ ಸಂಕಷ್ಟದ ಸಂದರ್ಭದಲ್ಲಿ ಆಸರೆಯಾಗಿ ನಿಂತಿದ್ದು ಆರ್ಸಿಬಿ ಫ್ರಾಂಚೈಸಿ. ಈ ಕಾರಣಕ್ಕಾಗಿಯೇ ವಿರಾಟ್ ಕೊಹ್ಲಿಗೆ ಕೂಡಾ ಆರ್ಸಿಬಿ ಎಂದರೆ ಎಲ್ಲಿಲ್ಲದ ಪ್ರೀತಿ.
ಈ ಕಾರಣಕ್ಕಾಗಿಯೇ 2023ರ ಐಪಿಎಲ್ ಟೂರ್ನಿಗೂ ಮುನ್ನ ಜಿಯೋ ಸಿನಿಮಾದ ಜತೆ ಮಾತನಾಡಿದ್ದ ವಿರಾಟ್ ಕೊಹ್ಲಿ, "ನಾನು ಯಾವ ಫ್ರಾಂಚೈಸಿ ಎಂದು ಹೆಸರು ಹೇಳಲು ಬಯಸುವುದಿಲ್ಲ. ನಾನಾಗ 5-6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ. ಆಗ ನಾನು ಅಗ್ರಕ್ರಮಾಂಕದಲ್ಲಿ ಆಡಲು ಬಯಸಿದ್ದೆ. ಆಗ ನೀವು ಹರಾಜಿಗೆ ಬನ್ನಿ ಎಂದು ಆಫರ್ ಮಾಡಿದರು. ಆದರೆ ನಾನು ಸಾಧ್ಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ನೀವು ಹರಾಜಿಗೆ ಬಂದರೆ ನಾವು 20 ಕೋಟಿ ರೂಪಾಯಿ ನೀಡಿ ಬೇಕಿದ್ದರೂ ಖರೀದಿಸುತ್ತೇವೆ ಎಂದು ಎದುರಾಳಿ ಐಪಿಎಲ್ ಫ್ರಾಂಚೈಸಿ ಆಫರ್ ನೀಡಿತ್ತು. ಆಗ ಕೊಹ್ಲಿ ನಿಯತ್ತು ಮುಖ್ಯವೇ ಹೊರತು ಹಣವಲ್ಲ ಎನ್ನುವ ಮೂಲಕ ಈ ಆಫರ್ ಸಾರಾಸಗಟಾಗಿ ತಿರಸ್ಕರಿಸಿದ್ದ ವಿಚಾರವನ್ನು ಹೇಳಿಕೊಂಡಿದ್ದರು.
ವಿರಾಟ್ ಕೊಹ್ಲಿ ಸದ್ಯ ಐಪಿಎಲ್ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.