ಮಂಜೂರಾದ ಜಮೀನು ಪಿಟಿಸಿಎಲ್ ಕಾಯಿದೆಯಡಿ ಮರು ಸ್ಥಾಪನೆ ಇಲ್ಲ
ಬೆಂಗಳೂರು: ಕರ್ನಾಟಕ ಭೂ ಸುಧಾರಣಾ ಕಾಯಿದೆಯಡಿಯಲ್ಲಿ ಭೂ ನ್ಯಾಯಮಂಡಳಿಗಳಿಂದ ಮಂಜೂರಾಗಿರುವ ಜಮೀನುಗಳನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ ವರ್ಗಾವಣೆ ನಿಷೇಧ) ಕಾಯಿದೆಯಡಿ (ಪಿಟಿಸಿಎಲ್) ಅಡಿಯಲ್ಲಿ ಪುನರ್ ಸ್ಥಾಪಿಸಲು ಉಪ ವಿಭಾಗಾಧಿಕಾರಿ (ಎಸಿ)ಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.
ಹಾಗಾಗಿ ಇನ್ನು ಮುಂದೆ ಎಸಿಗಳು ಆ ರೀತಿ ಜಮೀನು ಪುನರ್ ಸ್ಥಾಪನೆಗೆ ಅವಕಾಶವಿಲ್ಲದಂತಾಗಿದೆ. ಸರ್ಕಾರದಿಂದ ಮಂಜೂರಾದ ಜಮೀನುಗಳನ್ನು ಪಿಟಿಸಿಎಲ್ ಕಾಯಿದೆಯಡಿ ಪುನರ್ ಸ್ಥಾಪಿಸಲು ಉಪವಿಭಾಗಾಧಿಕಾರಿಗಳಿಗೆ ಅಧಿಕಾರವಿದೆ. ಆದರೆ, ಭೂ ಸುಧಾರಣಾ ನ್ಯಾಯಮಂಡಳಿಯಿಂದ ಮಂಜೂರಾದ ಜಮೀನುಗಳನ್ನು ಪುನರ್ ಸ್ಥಾಪಿಸಲು ಅಧಿಕಾರವಿಲ್ಲ ಎಂದು ಜಮೀನು ಖರೀದಿಸಿದ್ದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಕಲಬುರಗಿ ನ್ಯಾಯಪೀಠ ಆದೇಶಿಸಿದೆ.
ಅಲ್ಲದೆ ಉಪವಿಭಾಗಾಧಿಕಾರಿಗಳಿಗೆ ಪಿಟಿಸಿಎಲ್ ಕಾಯಿದೆಯ ಸೆಕ್ಷನ್ 4(2) ಅಡಿಯಲ್ಲಿ ಜಮೀನನ್ನು ಮರುಸ್ಥಾಪನೆ ಮಾಡಿ ಆದೇಶ ನೀಡುವುದಕ್ಕೆ ಅಧಿಕಾರವಿಲ್ಲ. ಅಲ್ಲದೆ, ಮೇಲ್ಮನವಿ ಪ್ರಾಧಿಕಾರವಾಗಿರುವ ಜಿಲ್ಲಾಧಿಕಾರಿಗಳು ಈ ಕುರಿತಂತೆ ಗಮನ ಹರಿಸದೆ ಆದೇಶ ಮಾಡಿದ್ದಾರೆ ಎಂದು ತಿಳಿಸಿದ ಪೀಠ, ಅರ್ಜಿಯನ್ನು ಪುರಸ್ಕರಿಸಿದ್ದು, ಜಿಲ್ಲಾಧಿಕಾರಿಗಳ ಆದೇಶ ರದ್ದುಪಡಿಸಿ ಆದೇಶಿಸಿದೆ.