ಗಮನ ಸೆಳೆದ ಮಾವು ಮೇಳ; ವಿವಿಧ ತಳಿಯ ಮಾವಿನ ಹಣ್ಣುಗಳ ಪ್ರದರ್ಶನ
ಉಡುಪಿ: ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಆರಂಭಗೊಂಡಿದೆ.
ಜಿಲ್ಲಾ ತೋಟಗಾರಿಕಾ ಇಲಾಖೆ ಹಾಗೂ ರಾಮನಗರ ಜಿಲ್ಲಾ ತೆಂಗು ಮತ್ತು ಮಾವು ರೈತ ಉತಾದಕರ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಈ ಮಾವು ಮೇಳ ನಡೆಯುತ್ತಿದೆ.
ಕರ್ನಾಟಕದಲ್ಲಿ ವೈವಿಧ್ಯಮಯ ಮಾವಿನಹಣ್ಣುಗಳನ್ನು ಅತಿಹೆಚ್ಚು ಬೆಳೆಯುವ ರಾಮನಗರ ಜಿಲ್ಲೆಯ ಮಾವು ಉತ್ಪಾದಕ ರೈತರು ನೇರವಾಗಿ ಇಲ್ಲಿ ತಾವು ಸಾವಯವ ರೀತಿಯಲ್ಲಿ ಬೆಳೆದ, ಅತ್ಯುತ್ತಮ ಗುಣಮಟ್ಟದ ಮಾವಿನ ಹಣ್ಣುಗಳನ್ನು ಈಗ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತಿದ್ದಾರೆ. ಇದರಲ್ಲಿ ಮಧ್ಯವರ್ತಿಗಳಾಗಲಿ, ದಲ್ಲಾಳಿಗಳ ಹಸ್ತಕ್ಷೇಪವಾಗಲಿ ಇರುವುದಿಲ್ಲ.
ರಾಮನಗರ ಜಿಲ್ಲೆಯ 13 ಮಂದಿ ಮಾವು ಬೆಳೆಗಾರರು ಇಲ್ಲಿ ಸದ್ಯ 20 ಟನ್ ಮಾವನ್ನು ಮಾರಾಟಕ್ಕೆ ತಂದಿದ್ದು, ಗ್ರಾಹಕರ ಬೇಡಿಕೆಯನ್ನು ನೋಡಿಕೊಂಡು ಇನ್ನೂ 20 ಟನ್ ಮಾವಿನ ಹಣ್ಣನ್ನು ತರಲು ಸಿದ್ಧತೆ ಮಾಡಿಕೊಂಡಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ಬೆಳೆದ ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಮಲ್ಲಿಕಾ, ಶುಗರ್ಬೇಬಿ (ಸಕ್ಕರೆಗುತ್ತಿ), ಬಂಗನ್ಪಲ್ಲಿ, ರತ್ನಗಿರಿ, ಕಾಲಾಪಾಡಿ, ಆಲ್ಪೋನ್ಸಾ ತಳಿಗಳ ಒಟ್ಟು 20 ಟನ್ ಮನಸೆಳೆಯುವ ಮಾವಿನಹಣ್ಣುಗಳು ಸದ್ಯ ಮಾವಿನ ಮೇಳದಲ್ಲಿ ಮಾರಾಟಕ್ಕೆ ಲಭ್ಯವಿದೆ.
ಮಾವು ಮೇಳದಲ್ಲಿ ನಾಡಿನಾದ್ಯಂತ ಜನಪ್ರಿಯಗೊಂಡಿರುವ ಅಲ್ಫೋನ್ಸಾ ತಳಿ ಭಾರೀ ಆಕರ್ಷಣೆಯ ಕೇಂದ್ರವಾಗಿದೆ. ಪ್ರತಿಯೊಬ್ಬ ಬೆಳೆಗಾರರು ತಾವು ಬೆಳೆದ ಹಣ್ಣುಗಳನ್ನು ಆಕರ್ಷಕ ರೀತಿಯಲ್ಲಿ ಪ್ರದರ್ಶನಕ್ಕಿಟ್ಟಿದ್ದು, ಆಕರ್ಷಕ ಬಣ್ಣ ಹಾಗೂ ಪರಿಮಳದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಮೇಳಕ್ಕೆ ಬಂದ ಜನರು ಅತಿಹೆಚ್ಚು ಈ ಹಣ್ಣುಗಳನ್ನು ಖರೀದಿಸುತಿದ್ದಾರೆ. ಕೆ.ಜಿ.ಗೆ 200ರೂ.ನಂತೆ ಇದು ಮಾರಾಟವಾಗುತ್ತಿದೆ.
ಶುಗರ್ಬೇಬಿ ತನ್ನ ಗಾತ್ರದ ಹಾಗೂ ಸಕ್ಕರೆಯಂತೆ ಸಿಹಿಯ ಮೂಲಕ ಎಲ್ಲರನ್ನು ಆಕರ್ಷಿಸುತಿದ್ದು ಇದು ಕೆ.ಜಿಗೆ 300ರೂ.ನಂತೆ ಮಾರಾಟವಾ ಗುತ್ತಿದೆ. ಸಿಂಧೂರ 100ರೂ.ಗೆ, ಮಲ್ಲಿಆ 200ರೂ.ಗೆ, ರಸಪೂರಿ 150, ಬಂಗನ್ಪಲ್ಲಿ 100ರೂ.ಗೆ ಮಾರಾಟವಾದರೆ ತೋತಾಪುರಿ ಕೆ.ಜಿಗೆ 50 ರೂ ಕನಿಷ್ಠ ದರವಾಗಿದೆ. ಇಮಾಮ್ ಪಸಂದ್ ತಳಿಯು ಕೆ.ಜಿಯೊಂದಕ್ಕೆ 400 ರೂ. ಇದ್ದು ಇದು ಮಾವಿನಲ್ಲೇ ಗರಿಷ್ಠ ದರದ ತಳಿಯಾಗಿದೆ.