ಉತ್ತರ ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮಾಸ್ ಕಾಪಿ ಆಗ್ತಿತ್ತು: ಭೋಜೇಗೌಡ
ಮಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಾಮೂಹಿಕ ನಕಲು ಆಗುತ್ತಿರುವುದನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಒಪ್ಪಿಕೊಂಡಿದ್ದಾರೆ. ಈ ಬಾರಿ ನೈಜ ಫಲಿತಾಂಶ ಬಂದಿದ್ದು, ಮುಂದಿನ ಅಧಿವೇಶನದಲ್ಲಿ ಸಾಮೂಹಿಕ ನಕಲು ಬಗ್ಗೆ ಕ್ರಮ ಜರುಗಿಸಲು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ವಿಧಾನ ಪರಿಷತ್ ಚುನಾವಣೆ ಸಲುವಾಗಿ ಸುದ್ದಿಗೋಷ್ಠಿ ನಡೆಸಿದ ಅವರು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಕಲು ಆಗುತ್ತಿರುವ ಶಂಕೆಯಲ್ಲಿ ಪರೀಕ್ಷಾ ಕೊಠಡಿಗಳಿಗೆ ಸಿಸಿಕ್ಯಾಮೆರಾ ಅಳವಡಿಸಬೇಕೆಂದು ಪರಿಷತ್ತಿನಲ್ಲಿ ಆಗ್ರಹ ಮಾಡಿದ್ದೆವು.
ಹಾಗಾಗಿ, ಈ ಬಾರಿ ಸರಕಾರ ಪರೀಕ್ಷಾ ಹಾಲ್ ಗಳಲ್ಲಿ ಸಿಸಿ ಕ್ಯಾಮೆರಾ ಇಟ್ಟು ನಿಗಾ ವಹಿಸಲಾಗಿತ್ತು. ಇದರಿಂದಾಗಿ ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಬಂದಿದೆ. ಇದು ಶಾಲಾ ಮಕ್ಕಳ ಕಲಿಕೆಯ ನೈಜ ಫಲಿತಾಂಶವನ್ನು ತೋರಿಸಿದೆ ಎಂದು ಹೇಳಿದರು. ಇನ್ನು ಆಗ ಆ ಭಾಗದಲ್ಲಿ ಮಾಸ್ ಕಾಪಿ ಆಗ್ತಾ ಇತ್ತು ಎಂದು ಪರೋಕ್ಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಕಾಪಿ ಆಗುತ್ತಿತ್ತು ಎಂದು ಆರೋಪಿಸಿದ್ದಾರೆ.
ಬಹಳ ಹಿಂದಿನಿಂದಲೂ ಅನ್ಯಾಯ ಆಗ್ತಾ ಇದೆ ಎಂದು ಹೋರಾಟ ಮಾಡಿದ್ದೆ. ನಿಜವಾದ ಶಿಕ್ಷಣ ಸಿಗಬೇಕು ಎಂದು ಪರಿಷತ್ನಲ್ಲಿ ಆಗ್ರಹಿಸಿದ್ದೆ. ಈಗ ನಾವು ಮತ್ತೆ ಅದರ ಬಗ್ಗೆ ಧ್ವನಿ ಎತ್ತಬೇಕಿದೆ. ಈ ಹಿಂದಿನ ಅನಾಹುತದ ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು. ಈಗಿನ ರಿಸಲ್ಟ್ ನೋಡಿಯಾದ್ರೂ ಹಿಂದಿನ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಈ ಬಗ್ಗೆ ನಾನು ಮುಂದೆ ಪರಿಷತ್ನಲ್ಲಿ ಆಗ್ರಹ ಮಾಡುತ್ತೇನೆ ಎಂದರು.