ಮಿಡ್ನೈಟ್ ಆಪರೇಷನ್: 300 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು: ಲೋಕಸಭಾ ಚುನಾವಣೆಯ ಕಣ ರಾಜ್ಯದಲ್ಲಿ ರಂಗೇರುತ್ತಿದೆ. ಕಾಂಗ್ರೆಸ್ ಗುರುವಾರ ರಾತ್ರಿ ಮಿಡ್ ನೈಟ್ ಆಪರೇಷನ್ ಮೂಲಕ ಜೆಡಿಎಸ್ಗೆ ಬಿಗ್ ಶಾಕ್ ನೀಡಿದೆ.
ಅಕ್ಕೂರ್ ದೊಡ್ಡಿ ಶಿವಣ್ಣ ಸೇರಿ ಚನ್ನಪಟ್ಟಣದ 300ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಕಾರ್ಯಕರ್ತರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಜೆಡಿಎಸ್ ನಾಯಕರಿಗೆ ಶಾಕ್ ಕೊಟ್ಟಿದ್ದಾರೆ. ಈ ವೇಳೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಡಿ.ಕೆ ಶಿವಕುಮಾರ್, ಚನ್ನಪಟ್ಟಣ ಭಾಗದ 300 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಬಹುತೇಕ ಕುಮಾರಸ್ವಾಮಿ ಅವರ ಆಪ್ತರೇ ಕಾಂಗ್ರೆಸ್ ಮೆಚ್ಚಿ ಬರುತ್ತಿದ್ದಾರೆ. ಈಗಾಗಲೇ ಮಾಗಡಿ, ರಾಮನಗರ, ಚನ್ನಪಟ್ಟಣ ಭಾಗದ 4 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರಿಕೊಂಡಿದ್ದಾರೆ. ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಡಿಕೆಶಿ ಕರೆ: ಕುಮಾರಸ್ವಾಮಿ ಮಂಡ್ಯಕ್ಕೆ ಹೊರಟು ಹೋಗಿದ್ದಾರೆ. ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲ್ಲಲ್ಲ. ಜೆಡಿಎಸ್ಗಾಗಿ ನಿಮ್ಮ ಸಮಯ ಹಾಳು ಮಾಡಿಕೊಳ್ಳಬೇಡಿ. ಎಲ್ಲರೂ ನಮ್ಮ ಜೊತೆ ಬನ್ನಿ, ನಿಮ್ಮ ಜೊತೆ ನಾನು ಇರ್ತೇನೆ ಎಂದು ಕಾರ್ಯಕರ್ತರಿಗೆ ಡಿಕೆಶಿ ಕರೆ ಕೊಟ್ಟಿದ್ದಾರೆ.
ನಿನ್ನೆ ತಡರಾತ್ರಿ 11.30ರ ಸುಮಾರಿಗೆ ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆದಿದೆ.