ʼಎಂ.ಎಸ್ ಧೋನಿಯೇ ವಂಚಕʼ ಎಂದ ಮಿಹಿರ್ ದಿವಾಕರ್
ಬೆಂಗಳೂರು: ಆರ್ಕಾ ಕ್ರಿಕೆಟ್ ಅಕಾಡೆಮಿಯ ಒಪ್ಪಂದದ ವಿಚಾರದಲ್ಲಿ ತಮಗೆ ₹15 ಕೋಟಿ ವಂಚಿಸಿದ್ದಾರೆಂದು ನ್ಯಾಯಾಲಯದ ಮೆಟ್ಟಿಲೇರಿರುವ ಭಾರತದ ಮಾಜಿ ನಾಯಕ ಎಂ.ಎಸ್.ಧೋನಿಗೆ, ಅಕಾಡೆಮಿ ಪಾಲುದಾರರಾಗಿರುವ ಮಿಹಿರ್ ದಿವಾಕರ್ ತಿರುಗೇಟು ನೀಡಿದ್ದಾರೆ. "ನಾನು ಧೋನಿಗೆ 15 ಕೋಟಿ ರು. ವಂಚಿಸಿಲ್ಲ, ಬದಲಾಗಿ ಧೋನಿಯೇ ನನಗೆ 5 ಕೋಟಿ ರು. ನೀಡಬೇಕು. ಅದು ನೀಡದೆ ವಂಚಿಸಿದ್ದಾರೆ" ಎಂದಿದ್ದಾರೆ.
ಧೋನಿ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ, ನನ್ನ ಹೆಸರು ಕೆಡಿಸುತ್ತಿದ್ದಾರೆ. ಸಂಸ್ಥೆಯಲ್ಲಿ ಧೋನಿ ಹಾಗೂ ಅವರ ನಿರ್ದೇಶಕರು ಅವ್ಯವಹಾರ ನಡೆಸಿ, ನನ್ನ ಮೇಲೆ ಆರೋಪ ಹೋರಿಸುತ್ತಿದ್ದಾರೆ. ಆರ್ಕಾ ಅಕಾಡೆಮಿಯ ಲಾಭ, ಶೇರುಗಳಲ್ಲಿ 70:30 ಒಪ್ಪಂದವಾಗಿತ್ತು ಎಂದು ಧೋನಿ ಹೇಳಿದ್ದಾರೆ. ಆದರೆ ಒಪ್ಪಂದದಲ್ಲಿ ಈ ರೀತಿ ಉಲ್ಲೇಖವೇ ಆಗಿಲ್ಲ. ಅದೆಲ್ಲಾ ಸುಳ್ಳು. ಧೋನಿಯ ವ್ಯವಹಾರಗಳನ್ನು ನಾನು ನೋಡಿಕೊಳ್ಳುತ್ತಿದ್ದೆ. ಅದರ ₹5 ಕೋಟಿ ನನಗೆ ಧೋನಿ ಬಾಕಿ ಉಳಿಸಿಕೊಂಡಿದ್ದಾರೆ. ಧೋನಿಗೆ ನಾನು ಹಣ ಬಾಕಿ ಇಟ್ಟಿಲ್ಲ. ಅಕಾಡೆಮಿಯಿಂದ ನೇರವಾಗಿ ಸಂಗ್ರಹಿಸಿದ ಹಣವನ್ನೇ ನನಗೆ ಧೋನಿ ಕೊಡಬೇಕಿದೆ ಎಂದು ದಿವಾಕರ್ ದೂರಿದ್ದಾರೆ.
ಅಕಾಡೆಮಿ ಒಪ್ಪಂದದಲ್ಲಿ ತಮಗೆ ಬರಬೇಕಿದ್ದ ಶೇರು, ಲಾಭವನ್ನು ನೀಡದೆ ವಂಚಿಸುತ್ತಿದ್ದಾರೆ ಎಂದು ಅಕಾಡೆಮಿಯ ಮಿಹಿರ್ ದಿವಾಕರ್, ಸೌಮ್ಯ ವಿಶ್ವಾಸ್ ವಿರುದ್ಧ ರಾಂಚಿ ನ್ಯಾಯಾಲಯದಲ್ಲಿ ಧೋನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು