ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ 'ಗಾಡ್ ಪ್ರಾಮಿಸ್' ಚಿತ್ರದ ಮುಹೂರ್ತ
ಉಡುಪಿ: ಕಾಂತಾರ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದ ಯುವ ನಟ ಸೂಚನ್ ಶೆಟ್ಟಿ ಅವರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಅವರು, ಕಾಮಿಡಿ ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿರುವ "ಗಾಡ್ ಪ್ರಾಮಿಸ್" ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಕಾರ್ಯಕ್ರಮವು ಕುಂದಾಪುರ ತಾಲೂಕಿನ ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಳದಲ್ಲಿ ನಡೆಯಿತು.
ಗಾಡ್ ಪ್ರಾಮಿಸ್ ಹೆಸರಿನ ಚಿತ್ರಕ್ಕೆ ಮೈತ್ರಿ ಪ್ರೊಡಕ್ಷನ್ ಇದರ ಮೈತ್ರಿ ಮಂಜುನಾಥ್ ಬಂಡವಾಳ ಹಾಕಿದ್ದಾರೆ. ಕರಾವಳಿಯ ದೈತ್ಯ ಪ್ರತಿಭೆ ಪ್ರಮೋದ್ ಶೆಟ್ಟಿ, ರಘು ಪಾಂಡೇಶ್ವರ್, ಕಾಂತಾರ ಖ್ಯಾತಿಯ ದೀಪಕ್ ರೈ, ಕರಣ್ ಕುಂದರ್ ಮತ್ತಿತರ ಹಿರಿಯ ಕಿರಿಯ ನಟರು ಚಿತ್ರದಲ್ಲಿ ನಟಿಸಲಿದ್ದಾರೆ. ಸುಂದರ ಫ್ಯಾಮಿಲಿ ಡ್ರಾಮ ಕತೆಗೆ ಗುರುಪ್ರಸಾದ್ ನಾರ್ನಾಡ್ ಕ್ಯಾಮೆರಾ ಹಿಡಿಯಲಿದ್ದು, ಭರತ್ ಮಧುಸೂಧನ್ ಸಂಗೀತಾ ನೀಡಲಿದ್ದಾರೆ.
ಕಾಂತಾರ ಚಿತ್ರದಲ್ಲಿ ಅರಣ್ಯ ಅಧಿಕಾರಿಯ ಜೊತೆ ಫಾರೆಸ್ಟ್ ಗಾರ್ಡ್ ರವಿ ಹೆಸರಿನಲ್ಲಿ ಕಾಣಿಸಿಕೊಂಡಿದ್ದ ಸೂಚನ್ ಶೆಟ್ಟಿ ಕರಾವಳಿಯ ಹೊಸ ಭರವಸೆಯ ಪ್ರತಿಭೆ ಎಂದರೆ ತಪ್ಪಾಗಲಾರದು. ಕೆಜಿಎಫ್ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಗರಡಿಯಲ್ಲಿ ಪಳಗಿ ಕಾಂತಾರ ನಿರ್ದೇಶಕ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಜೊತೆಗೆ ಗುರುತಿಸಿಕೊಂಡಿರುವ ಸೂಚನ್ ಶೆಟ್ಟಿ ಈ ಬಾರಿ ಗಾಡ್ ಪ್ರಾಮಿಸ್ ಹೆಸರಿನ ಹೊಸ ಚಿತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಮೊದಲ ಬಾರಿಗೆ ನಿರ್ದೇಶನದ ಜೊತೆ ನಾಯಕ ನಟನಾಗಿ ಕೂಡ ಸೂಚನ್ ಶೆಟ್ಟಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಜೊತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದ ಸೂಚನ್ ಶೆಟ್ಟಿ ಸೋಶಿಯಲ್ ಮೀಡಿಯಾ ಪ್ರಮೋಟರ್ ಆಗಿಯೂ ಕೂಡ ಗುರ್ತಿಸಿಕೊಂಡವರು. ನಟನೆಯ ಜೊತೆ ನಿರ್ದೇಶನದ ಆಸಕ್ತಿ ಇರುವ ಸೂಚನೆ ಕಟಕ, ಬಿಲಿಂಡರ್ ಮೊದಲಾದ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲೂ ಕೂಡ ಕೆಲಸ ಮಾಡಿದ್ದರು.
ಒಟ್ಟಾರೆಯಾಗಿ ಕರಾವಳಿಯ ಹೊಸ ಪ್ರತಿಭೆ ಸೂಚನ್ ಶೆಟ್ಟಿ ನಟನೆಯ ಜೊತೆ ಚಿತ್ರದ ನಿರ್ದೇಶನಕ್ಕೂ ಕೈ ಹಾಕಿದ್ದಾರೆ. ಕರಾವಳಿಯ ಈ ಹೊಸ ಭರವಸೆಯ ಬೆನ್ನಿಗೆ ಹಿರಿಯ ಸಂಗೀತ ನಿರ್ದೇಶಕ ರವಿ ಬಸ್ರೂರು, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಪ್ರಮೋದ್ ಶೆಟ್ಟಿ ಎಂಥ ಪ್ರತಿಭೆಗಳು ನಿಂತಿರುವುದು, ಚಿತ್ರ ರಸಿಕರಿಗೆ ಗಾಡ್ ಪ್ರಾಮಿಸ್ ಕುರಿತಾಗಿ ಹೊಸ ಭರವಸೆ ಹುಟ್ಟಿಸಿದೆ.