ಮುಂಬೈ ದಾಳಿ ಸಂಚು ಮಾಡಿದ ಉಗ್ರನಿಗೆ ಪಾಕಿಸ್ತಾನದಲ್ಲಿ ವಿಷಪ್ರಾಶನ
ಇಸ್ಲಾಮಾಬಾದ್: ಭಾರತದಲ್ಲಿ ಉಗ್ರ ಕೃತ್ಯ ನಡೆಸಿದ್ದ ಮತ್ತು ಉಗ್ರ ಕೃತ್ಯಗಳಿಗೆ ಸಂಚು ಹೂಡಿದ್ದ ಹಲವು ಉಗ್ರರು ಪಾಕಿಸ್ತಾನ ಸೇರಿದಂತೆ ವಿದೇಶಿ ನೆಲದಲ್ಲಿ ನಿಗೂಢವಾಗಿ ಹತ್ಯೆಯಾಗುತ್ತಿದ್ದಾರೆ. ಆ ಪಟ್ಟಿಗೆ ಹೊಸ ಹೆಸರೊಂದು ಸೇರ್ಪಡೆಯಾಗಿದೆ. ಮುಂಬೈ ದಾಳಿಯ ಪ್ರಮುಖ ಸಂಚುಕೋರ, ಲಷ್ಕರ್ ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಸದಸ್ಯ ಸಾಜಿದ್ ಮಿರ್ ವಿಷ ಆಹಾರ ಸೇವಿಸಿದ್ದು ಸದ್ಯ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವರದಿಯಾಗಿದೆ.
ಕೆಲವು ತಿಂಗಳ ಹಿಂದೆ ಸಾಜಿದ್ ಮಿರ್ನನ್ನು ಲಾಹೋರ್ ಜೈಲಿನಿಂದ ಡೇರಾ ಘಾಜಿ ಖಾನ್ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಸದ್ಯ ವಿಷ ಆಹಾರ ಸೇವಿಸಿ ಗಂಭೀರವಾಗಿ ಅಸ್ವಸ್ಥಗೊಂಡಿರುವ ಸಾಜಿದ್ ಮಿರ್ನನ್ನು ಪಾಕಿಸ್ತಾನ ಸೇನೆ ಏರ್ಲಿಫ್ಟ್ ಮಾಡಿ ಬಹವಾಲ್ಪುರದ ಸಿಎಂಎಚ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿಗೆ ದಾಖಲಿಸಲಾಗಿದೆ. ವಿಷ ಪ್ರಾಶನ ಪ್ರಕರಣ ವರದಿಯಾದ ಬೆನ್ನಲ್ಲೇ ಜೈಲಿನಲ್ಲಿದ್ದ ಅಡುಗೆ ಮಾಡುತ್ತಿದ್ದ ವ್ಯಕ್ತಿ ನಾಪತ್ತೆಯಾಗಿದ್ದಾನೆ.
ಸಾಜಿದ್ ಮಿರ್ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್ಇಟಿ) ಹಿರಿಯ ಸದಸ್ಯನಾಗಿದ್ದು 2008ರ ನವೆಂಬರ್ನಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿದ್ದಾನೆ. ಮುಂಬೈ ಭಯೋತ್ಪಾದಕ ದಾಳಿಯಲ್ಲಿನ ಪಾತ್ರಕ್ಕಾಗಿ ಅಮೆರಿಕ ಆತನ ತಲೆಗೆ 5 ದಶಲಕ್ಷ ಡಾಲರ್ ಬಹುಮಾನ ಘೋಷಿಸಿದೆ.