ಆರ್ಸಿಬಿ vs ಸಿಎಸ್ಕೆ: ಚಾಲೆಂಜ್ ಹಾಕಿ ಖಾಕಿ ಅತಿಥಿಯಾದ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್
ಬೆಂಗಳೂರು: ಶನಿವಾರ ನಡೆದ ಹೈವೋಲ್ಟೇಜ್ ಆರ್ಸಿಬಿ ವರ್ಸಸ್ ಸಿಎಸ್ಕೆ ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶ ಮಾಡುವುದಾಗಿ ವಿಡಿಯೋ ಪೋಸ್ಟ್ ಮಾಡಿದ್ದ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಒಬ್ಬರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮೇ 18 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2024 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಿತು. ಈ ವೇಳೆ ಭದ್ರತೆಯನ್ನು ಉಲ್ಲಂಘಿಸಿ ಪಿಚ್ಗೆ ನುಗ್ಗುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ನಿತಿನ್ ಸಿಕ್ವೇರಿಯಾ ಹೇಳಿಕೊಂಡಿದ್ದರು.
ಈ ವಿಡಿಯೋ ವೈರಲ್ ಆಗಿದ್ದು, ಭದ್ರತೆಯನ್ನು ಉಲ್ಲಂಘಿಸಲು ಯತ್ನಿಸಿದ್ದಕ್ಕಾಗಿ ಕಬ್ಬನ್ ಪಾರ್ಕ್ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 50 ಸಾವಿರ (50K) ಫಾಲೋವರ್ಸ್ ಬಂದರೆ ಆರ್ಸಿಬಿ ಪಂದ್ಯದ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಓಡುವುದಾಗಿ ತಮ್ಮ ಫಾಲೋವರ್ಸ್ಗೆ ಭರವಸೆ ನೀಡಿದ್ದರು.
ನಿತಿನ್ ಸಿಕ್ವೇರಿಯಾ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಬೆಂಗಳೂರು ಪೊಲೀಸರು ಕ್ರೀಡಾಂಗಣದಲ್ಲಿ ಭದ್ರತಾ ಲೋಪವನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಾಯಿತು. ಬಳಿಕ ಅವರನ್ನು ವಶಕ್ಕೆ ಪಡೆದಿದ್ದಾರೆ. ಟ್ವಿಟರ್ ಪೋಸ್ಟ್ನಲ್ಲಿ, ಬೆಂಗಳೂರು ಪೊಲೀಸರು "ಒಳ್ಳೆಯ ಪ್ರಯತ್ನ, ಸ್ನೇಹಿತರೇ! ಆದರೆ ಐಪಿಎಲ್ ಸಮಯದಲ್ಲಿ ಭದ್ರತೆಯನ್ನು ಉಲ್ಲಂಘಿಸಲು ಪ್ರಯತ್ನಿಸಿದರೆ ನೇರವಾಗಿ ಆರು ನಮ್ಮ ಕಸ್ಟಡಿಗೆ ಗ್ಯಾರಂಟಿ" ಎಂದು ವ್ಯಂಗ್ಯದ ಟ್ವೀಟ್ ಹಾಕಿದ್ದಾರೆ.
Nice try, Buddy! 🏏 But attempting to breach security during #IPL is a guaranteed six straight into our custody. Sorry, mate, you're stumped! #RCBvsCSK #WeServeWeProtect pic.twitter.com/Dj4sMXq9jt
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) May 18, 2024