ನಟಿ ಅಮೂಲ್ಯ ಮಾವನ ಮನೆಯ ಮೇಲೆ ಚುನಾವಣಾಧಿಕಾರಿಗಳ ದಾಳಿ
ಬೆಂಗಳೂರು: ರಾಜರಾಜೇಶ್ವರಿ ನಗರ ಮಾಜಿ ಕಾರ್ಪೋರೇಟರ್ ಹಾಗೂ ನಟಿ ಅಮೂಲ್ಯ ಅವರ ಮಾವನ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಆರ್.ಆರ್ ನಗರದಲ್ಲಿರುವ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳು ರಾಮಚಂದ್ರಪ್ಪ ಮನೆಯಲ್ಲಿ ಶೋಧ ಮಾಡಿದ್ದಾರೆ.
ಇನ್ನು ರಾಮಚಂದ್ರಪ್ಪ ಮನೆಯಲ್ಲಿ ಯಾವುದೇ ಬೆಲೆಬಾಳುವ ವಸ್ತು ಅಥವಾ ಹಣಪತ್ತೆಯಾಗಿಲ್ಲ. ಮನೆಯ ಫಂಕ್ಷನ್ಗೆ ಅಂತಾ ಸಂಗ್ರಹಿಸಿದ್ದ 31 ಲೀಟರ್ ಮದ್ಯವನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ರಾಮಚಂದ್ರ, ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು ಮನೆ ಮೇಲೆ ದಾಳಿ ಮಾಡಿಸಿದ್ದಾರೆ. ಕಾಂಗ್ರೆಸ್ ನವರು ಈ ಭಾಗದಲ್ಲಿ ಹಣ ಹಂಚಿಕೆ ಮಾಡುತ್ತಿದ್ದರು. ಅದಕ್ಕೆ ನಾವು ಅಡ್ಡಿ ಪಡಿಸುತ್ತೇವೆ ಅಂತ ನಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಆರ್ ಓ ಗೆ ಪದೇ ಪದೇ ಫೋನ್ ಬರ್ತಾನೆ ಇತ್ತು. ಅವರನ್ನು ಎರಡು ದಿನಕ್ಕಾದರೂ ಒಳಕ್ಕೆ ಹಾಕಿಸಿ ಅಂತಾ ಹೇಳುತ್ತಿದ್ದರು. ಏನೋ ದೊಡ್ಡದಾಗಿ ಸಿಗುತ್ತೆ, ಕೂಲ್ ಆಗುತ್ತೆ ಅಂತಾ ಬಂದರು, ಹಾಟ್ ಆಗಿ ಹೋದರು ಎಂದು ಹೇಳಿದರು.
ಅಲ್ಲದೇ, ಮೊಮ್ಮಕ್ಕಳ ಹುಟ್ಟುಹಬ್ಬಕ್ಕಾಗಿ ಲಿಕ್ಕರ್ ತರಿಸಿದ್ದೆ. ಅದು ಚುನಾವಣೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಹುಟ್ಟುಹಬ್ಬ ಮಾಡಬಾರದು ಅಂತಾ ಸುಮ್ನೇ ಆಗಿದ್ದೇವು. ಅದನ್ನ ವಶಕ್ಕೆ ಪಡೆದಿದ್ದಾರೆ. ಏನ್ ವಶಕ್ಕೆ ಪಡೆದಿದ್ದೇವೆ ಅಂತಾ ಒಂದು ಸಹಿ ಪಡೆದಿದ್ದಾರೆ. ಈ ಭಾಗದಲ್ಲಿ ಬಿಜೆಪಿಗೆ ಲೀಡ್ ಬರುತ್ತೆ, 18 ಸಾವಿರ ಲೀಡ್ ಬಂದಿತ್ತು. ಅದನ್ನ ಸಹಿಸಲಾಗದೆ ಅಧಿಕಾರ ಮಿಸ್ ಯುಸ್ ಮಾಡಿದ್ದಾರೆ ಎಂದು ರಾಮಚಂದ್ರ ಆರೋಪಿಸಿದ್ದಾರೆ.