ನಮ್ಮ ಸರ್ಕಾರ ಇನ್ನೂ ನಾಲ್ಕು ವರ್ಷ ಇರಲಿದೆ: ಸತೀಶ್ ಜಾರಕಿಹೊಳಿ
ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರ ಬೀಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದೆ ಎಂಬ ಮಹಾರಾಷ್ಟ್ರದ ಸಿಎಂ ಏಕನಾಥ್ ಶಿಂಧೆಯವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಏಕನಾಥ್ ಶಿಂಧೆ ಮಾತಾಡಲು ಸ್ವತಂತ್ರರು, ಅವರು ಮಾತಾಡ್ತಾರೆ, ಮಾತಾಡಲಿ. ನಮ್ಮ ಸರ್ಕಾರ ಇನ್ನೂ ನಾಲ್ಕು ವರ್ಷ ಇರಲಿದೆ. ಸರ್ಕಾರ ಪತನದ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷದೊಳಗೆ ಅಸಮಾಧಾನ ಇರೋದು ನಿಜ. ಸರ್ಕಾರ ಇರುವವರೆಗೂ ಇಂತಹ ಸಮಸ್ಯೆಗಳು ಇರಲಿದೆ. ಆಗಾಗ ಇದಕ್ಕೆಲ್ಲ ರಿಪೇರಿ ಮಾಡುತ್ತೇವೆ. 5 ಮೀಟರ್, 7 ಮೀಟರ್ ಜಂಪ್ ಮಾಡಬಹುದು, 15 ಮೀಟರ್ ಜಂಪ್ ಮಾಡುವುದು ಕಷ್ಟದ ಕೆಲಸ. ಈ ಗ್ಯಾಪ್ ಬಹಳ ಇದೆ, ನಮ್ಮ ಸರ್ಕಾರ ಬೀಳಲ್ಲ ಎಂದರು.
ಇದೇ ವಿಚಾರ ಇಟ್ಟುಕೊಂಡು ಸರ್ಕಾರ ಬೀಳಲಿದೆ ಎನುವುದು ಸರಿಯಲ್ಲ. ಪಕ್ಷದೊಳಗಿನ ಸಮಸ್ಯೆಯನ್ನು ಪಕ್ಷದ ವರಿಷ್ಠರು ಸರಿಪಡಿಸುತ್ತಾರೆ. ನಮಗೆ 5 ವರ್ಷ ವಿಧಾನಸಭೆಗೆ ಜನಾದೇಶ ಇದೆ. ನಮ್ಮದೇನಿದ್ರೂ ಪಾರ್ಟಿ ಒಳಗಿನ ಅಸಮಾಧಾನ, ಪಾರ್ಟಿ ಹೊರಗೆ ನಮ್ಮ ಘರ್ಷಣೆಯಲ್ಲ. ಅವರ ಪಕ್ಷದಲ್ಲೂ ಭಿನ್ನಮತ ಇಲ್ವಾ? ಬಿಜೆಪಿಯವರು ಹೇಗೆಲ್ಲ ಮಾತಾಡ್ತಿದ್ದಾರೆ ಗೊತ್ತಿಲ್ವಾ? ವರ್ಗಾವಣೆ, ಅಭಿವೃದ್ಧಿ ವಿಚಾರದಲ್ಲಿ ಸಮಸ್ಯೆ ಇರಬಹುದು, ಅದನ್ನೇ ಇಟ್ಕೊಂಡು ಸರ್ಕಾರ ಬೀಳುತ್ತೆ ಎನ್ನುವುದು ಸುಳ್ಳು. ಮಹಾರಾಷ್ಟ್ರ ರಾಜಕೀಯ ಬೇರೆ, ಅದನ್ನು ಕರ್ನಾಟಕಕ್ಕೆ ಹೋಲಿಕೆ ಮಾಡಲು ಬರುವುದಿಲ್ಲ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ.