ಪಿಂಚಣಿಗೆ ಪತಿಯ ಬದಲು ಮಕ್ಕಳ ನಾಮನಿರ್ದೇಶನಕ್ಕೆ ಅವಕಾಶ
ನವದೆಹಲಿ: ವೈವಾಹಿಕ ಜೀವನ ಸುಗಮವಾಗಿರದ ಸಂದರ್ಭಗಳಲ್ಲಿ ಮಹಿಳಾ ಉದ್ಯೋಗಿಗಳು ಪಿಂಚಣಿಗೆ ತಮ್ಮ ಮಕ್ಕಳ ಹೆಸರನ್ನು ನೊಂದಾಯಿಸಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಮಾಹಿತಿ ನೀಡಿದೆ.
ಈ ಮೊದಲು ಕೇಂದ್ರೀಯ ನಾಗರಿಕ ಸೇವೆಗಳ (ಪಿಂಚಣಿ)ನಿಯಮ, ೨೦೨೧ರ ನಿಯಮ ೫೦ರ ಪ್ರಕಾರ, ಸರ್ಕಾರಿ ಉದ್ಯೋಗಿಗಳು ಮರಣ ಹೊಂದಿದರೆ ಪಿಂಚಣಿಯನ್ನು ಅವರ ಸಂಗಾತಿಗೆ ನೀಡಲಾಗುತ್ತಿತ್ತು. ಆ ಸಂಗಾತಿಯೂ ನಿಧನರಾದರೆ ಪಿಂಚಣಿಯ ಮೊತ್ತ ಕುಟುಂಬದ ಉಳಿದ ಸದಸ್ಯರ ಕೈಸೇರುತ್ತಿತ್ತು.
ಈ ನಿಯಮಗಳನ್ನು ತಿದ್ದುಪಡಿ ಮಾಡಿದ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ, ಮಹಿಳಾ ಉದ್ಯೋಗಿಗಳು ತಮ್ಮ ಗಂಡನ ಬದಲು ಮಗು ಅಥವ ಮಕ್ಕಳ ಹೆಸರನ್ನು ಪಿಂಚಣಿಗಾಗಿ ನಾಮನಿರ್ದೇಶನ ಮಾಡಲು ಅವಕಾಶ ಒದಗಿಸಿದೆ. ಇದರಿಂದ ವಿಚ್ಛೇದನಕ್ಕೆ ಅರ್ಜಿ ಅಥವ ಕೌಟುಂಬಿಕ ಹಿಂಸಾಚಾರಗಳಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯಡಿ ಮತ್ತು ಭಾರತೀಯ ದಂಡ ಸಂಹಿತೆಯಡಿ ಅರ್ಜಿ ಸಲ್ಲಿಸಿದ ಎಲ್ಲಾ ಸಂದರ್ಭಗಳಲ್ಲಿ ಮಹಿಳಾ ಉದ್ಯೋಗಿಗಳಿಗೆ ಈ ಸವಲತ್ತನ್ನು ಒದಗಿಸಲಾಗುತ್ತದೆ ಎಂದು ಡಿಒಪಿಪಿಡಬ್ಲೂ ಕಾರ್ಯದರ್ಶಿ ವಿ.ಶ್ರೀನಿವಾಸ್ ತಿಳಿಸಿದ್ದಾರೆ.
ಇದಕ್ಕಾಗಿ ಸಂಬಂಧಪಟ್ಟ ಕಛೇರಿಯ ಮುಖ್ಯಸ್ಥರಿಗೆ ಲಿಖಿತ ಮನವಿ ಸಲ್ಲಿಸಬಹುದೆಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.