ಅನಂತ್ ಕುಮಾರ್ ಹೆಗಡೆ ವಿರುದ್ಧ ಪ್ರತಿಭಟನೆ; ಭಾವಚಿತ್ರಕ್ಕೆ ಬೆಂಕಿ
ಉಡುಪಿ: ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳು ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ಇಂದು ಪ್ರತಿಭಟನೆ ನಡೆಸಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರೊ.ಫಣಿರಾಜ್, ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಆರ್.ಎಸ್.ಎಸ್ ಹರಡಿದ ವಿಷ. ಅದನ್ನು ಇವರು ನಾಚಿಕೆಯಿಲ್ಲದೆ ಹರಡುತ್ತಿದ್ದಾರೆ. 400 ಸೀಟು ಕೊಡಿ ಸಂವಿಧಾನ ಬದಲಾಯಿಸುತ್ತೇವೆ ಎಂದು ನಾಚಿಕೆಯಿಲ್ಲದೆ ಹೇಳುತ್ತಿದ್ದಾರೆ. ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ, ಬಿಜೆಪಿಗೆ ಕೊಡುವ ಒಂದೊಂದು ಓಟು ಆರ್.ಎಸ್.ಎಸ್ ನ್ನು ಬಲಪಡಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಸುಂದರ್ ಮಾಸ್ತರ್, ಮಂಜುನಾಥ್ ಗಿಳಿಯಾರ್, ಸಂವರ್ತ್ ಸಾಹಿಲ್, ಬಾಲಕೃಷ್ಣ ಶೆಟ್ಟಿ, ವೆರೋನಿಕಾ ಕರ್ನೆಲಿಯೋ ಮಾತನಾಡಿದರು.
ಪ್ರತಿಭಟನೆಯ ಕೊನೆಯಲ್ಲಿ ಅನಂತ್ ಕುಮಾರ್ ಹೆಗಡೆ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಡುಪಿ ಕ್ಯಾಥಲಿಕ್ ಸಭಾ ಮಾಜಿ ಅಧ್ಯಕ್ಷೆ ಮೇರಿ, ಮುಸ್ಲಿಂ ಒಕ್ಕೂಟದ ತಾಲೂಕು ಅಧ್ಯಕ್ಷ ಇರ್ಷಾದ್ ನೇಜಾರ್, ಶ್ಯಾಮರಾಜ್ ಬಿರ್ತಿ, ಕವಿರಾಜ್, ಸಾಲಿಡಾರಿಟಿ ಯೂತ್ ಮೂಲ್ಕೆಂಟ್'ನ ನಬೀಲ್ ಗುಜ್ಜರ್ ಬೆಟ್ಟು, ಅಝೀಝ್ ಉದ್ಯಾವರ, ನಾಗೇಶ್ ಉದ್ಯಾವರ ಉಪಸ್ಥಿತರಿದ್ದರು.