ಹರೇಕಳದಲ್ಲಿ ಹಾಜಬ್ಬರ ಕನಸಿನ ಪದವಿಪೂರ್ವ ಶಿಕ್ಷಣ ಆರಂಭ
ಮಂಗಳೂರು: ತಾನು ಅನಕ್ಷರಸ್ಥನಾದರೂ ತನ್ನ ಊರಿನ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದೊಂದಿಗೆ ಹರೇಕಳ ಹಾಜಬ್ಬರು ಕಿತ್ತಲೆ ಹಣ್ಣು ಮಾರಾಟ ಮಾಡಿ ಜೀವನ ನಿರ್ವಹಣೆಯೊಂದಿಗೆ ಹರೇಕಳದ ನ್ಯೂಪಡ್ಪು ಎಂಬಲ್ಲಿ ಶಾಲೆಯೊಂದರ ಆರಂಭಕ್ಕೆ ಕಾರಣಕರ್ತರಾದರು.
ಬಳಿಕ ಪ್ರೌಢಶಾಲೆಯ ಕನಸು ಕೂಡಾ ನನಸಾಗಿದ್ದು, ಇದೀಗ ಅವರ ಮಹದಾಸೆಯಂತೆ ಪದವಿ ಪೂರ್ವ ಕಾಲೇಜು ಆರಂಭಕ್ಕೂ ಸರ್ಕಾರ ಅನುಮತಿ ನೀಡಿದ್ದು, ಪ್ರಸಕ್ತ ವರ್ಷದಿಂದ ತರಗತಿ ಆರಂಭವಾಗಲಿದೆ.
ಪ್ರಸ್ತುತ ವರ್ಷದಿಂದ ಶಾಲೆಯಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಪದವಿ ಪೂರ್ವ ಶಿಕ್ಷಣ ಕಾರ್ಯಾರಂಭಗೊಳ್ಳಲಿದ್ದು, ಕಾಲೇಜಿಗೆ ಪ್ರಭಾರ ಪ್ರಾಂಶುಪಾಲರನ್ನು ನಿಯೋಜನೆ ಮಾಡಲಾಗಿದೆ. ಈಗಾಗಲೇ ಪಿಯುಸಿ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.
ನ್ಯೂಪಡ್ಪು ಶಾಲೆಯಿಂದ ಸಮೀಪದ ಹರೇಕಳ ದಗನೆಪಡ್ಪು ಬಳಿ ಕಾಲೇಜಿಗೆ 1.3 ಎಕ್ರೆ ಜಾಗ ಮೀಸಲಿಟ್ಟಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನೊಂದಾವಣೆಯಾಗಿದೆ.
ಪ್ರಸಕ್ತ ಸಾಲಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ತರಗತಿಗಳು ಆರಂಭಗೊಳ್ಳಲಿದ್ದು, ಪ್ರಭಾರ ಪ್ರಾಂಶುಪಾಲರಾಗಿ ನಾಯಿಲಪದವು ಸರಕಾರಿ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರದ ಉಪನ್ಯಾಸಕ ಅಬ್ದುಲ್ ರಝಾಕ್ ಅವರು ನಿಯೋಜನೆಗೊಂಡು ನ್ಯೂಪಡ್ಪು ಶಾಲೆಗೆ ಆಗಮಿಸಿದ್ದಾರೆ.