ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೆ: ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನಿಗೆ ಮಲ್ಲಿಗೆ ಅರ್ಪಣೆ
ಪುತ್ತೂರು: ಇತಿಹಾಸ ಪ್ರಸಿದ್ದ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದಲ್ಲಿ ಏ.16ರಂದು ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಕಿರುವಾಳು ಸೂಟೆಯ ಬೆಳಕಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮನವಾಯಿತು.
ಸೂಟೆಯ ಬೆಳಕಿನಲ್ಲೇ ಬಲ್ನಾಡಿನಿಂದ ಶ್ರೀ ಮಹಾಲಿಂಗೇಶ್ವರ ದೇವರ ಕ್ಷೇತ್ರಕ್ಕೆ ಬಂದ ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರು ಜಾತ್ರೆಯಲ್ಲಿ ಪಾಲ್ಗೊಂಡರು. ಕಿರುವಾಳು ಮೆರವಣಿಗೆಯ ದಾರಿ ಮಧ್ಯೆ ಭಕ್ತರು ಸಾಲು ಸಾಲಾಗಿ ಆರತಿ ನೆರವೇರಿಸಿದರು. ಕಿರುವಾಳು ದೇವಳಕ್ಕೆ ತಲುಪಿದ ಬಳಿಕ ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಶ್ರೀ ಶ್ರೀಧರ್ ತಂತ್ರಿಯವರ ವೈದಿಕತ್ವದಲ್ಲಿ ರಾತ್ರಿಯಿಂದ ಬೆಳಗ್ಗಿನ ಜಾವದ ತನಕ ಉತ್ಸವಾದಿಗಳು ನಡೆಯಿತು.
ಕಿರುವಾಳು ಆಗಮನಕ್ಕೆ ಸಂಬಂಧಿಸಿ ಉಳ್ಳಾಲ್ತಿ ಅಮ್ಮನವರಿಗೆ ಬೆಳಗ್ಗಿನಿಂದಲೇ ಭಕ್ತರು ಮಲ್ಲಿಗೆ ಸಮರ್ಪಿಸುತ್ತಿದ್ದರು. ಬೆಳಗ್ಗಿನಿಂದಲೇ ಭಕ್ತರಿಗೆ ದೈವಗಳ ಭಂಡಾರದ ಸ್ಥಾನದಲ್ಲಿ ಸಮರ್ಪಣೆಗೆ ಅವಕಾಶ ನೀಡಲಾಯಿತು. ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ಆಡಳಿತಾಧಿಕಾರಿ ದೇವಪ್ಪ ಪಿ.ಆರ್, ನಿಕಟಪೂರ್ವ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ತಿಮ್ಮಪ್ಪ ಗೌಡ, ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಸದಸ್ಯರಾದ ಚಿದಾನಂದ ಬೈಲಾಡಿ, ಅರ್ಚಕರು ವಿವಿಧ ವ್ಯವಸ್ಥೆ ನೆರವೇರಿಸಿದರು.
ಸಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ಹರೀಶ್ ಶೆಟ್ಟಿ, ಭಂಡಾರದ ಸ್ಥಾನಕ್ಕೆ ತೆರಳಿ ದೇವಳದ ಕಡೆಯಿಂದ ಮಲ್ಲಿಗೆ ಸಮರ್ಪಣೆ ಮಾಡಿದರು. ಸಂಜೆ ಗಂಟೆ 6ಕ್ಕೆ ಬಲ್ನಾಡು ದೈವಗಳ ಭಂಡಾರದ ಸ್ಥಾನದಿಂದ ಹೊರಟ ಕಿರುನಾಳು ರಾತ್ರಿ ಸುಮಾರು 8.35ಕ್ಕೆ ಕರ್ಕುಂಜ ತಲುಪಿ ಅಲ್ಲಿಂದ ಸುಮಾರು ಗಂಟೆ 9.28ಕ್ಕೆ ಬಪ್ಪಳಿಗೆ ತಲುಪಿತ್ತು 10.15ಕ್ಕೆ ಮಹಿಳಾ ಪೊಲೀಸ್ ಠಾಣೆಯ ಬಳಿಯ ಅಂಕದಕಟ್ಟೆಗೆ ಬಂದು ಅಲ್ಲಿ ಭಕ್ತರು ಸಮರ್ಪಣೆ ಮಾಡಿದ ಮಲ್ಲಿಗೆ ಸ್ವೀಕಾರ ಮಾಡಿ ದೇವಳಕ್ಕೆ ಪುಷ್ಕರಣಿಯ ಭಾಗದಿಂದ ಆಗಮಿಸಿ ಗಂಟೆ 10.46ಕ್ಕೆ ಶ್ರೀ ಉಳ್ಳಾಲ್ತಿ ನಡೆಯ ಬಳಿ ಶ್ರೀ ಮಹಾಲಿಂಗೇಶ್ವರ ದೇವರ ಭೇಟಿ ನಡೆಯಿತು.
ಈ ಸಂದರ್ಭದಲ್ಲಿ ಉಳ್ಳಾಲ್ತಿಯ ಪಾತ್ರಿಯಾಗಿ ಕೃಷ್ಣರಾಜ್, ದಂಡನಾಯಕ ಪಾತ್ರಿಯಾಗಿ ಪರಮೇಶ್ವರ ಗೌಡ, ಮಲರಾಯನ ಪಾತ್ರಿಯಾಗಿ ತೀರ್ಥಪ್ರಸಾದ್, ಕಲ್ಲುರ್ಟಿ ಪಾತ್ರಿಯಾಗಿ ಅಚ್ಚುತ ಗೌಡ, ಅಲ್ಲದೆ ಬೆಳಿಯಪ್ಪ ಗೌಡ, ಲೋಕೇಶ್ ಗೌಡ, ಮಂಜಪ್ಪ ಗೌಡ ಕುಕ್ಕುತ್ತಡಿ, ಉಮೇಶ್ ಗೌಡ ಅವರು ಸಂಪ್ರದಾಯದಂತೆ ಪಾತ್ರಿಗಳಾಗಿ ಸಹಕರಿಸಿದರು. ದೇವಸ್ಥಾನದ ಪ್ರಧಾನ ಆರ್ಚಕ ರವಿಚಂದ್ರ ನೆಲ್ಲಿತ್ತಾಯ, ಕಚೇರಿ ನಿರ್ವಾಹಕ ಚಂದ್ರಶೇಖರ್ ಭಟ್, ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತಿತ್ತರರು ಉಪಸ್ಥಿತರಿದ್ದರು.