ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣಗೆ ಮಧ್ಯಂತರ ಜಾಮೀನು
ಬೆಂಗಳೂರು: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಮಧ್ಯಂತರ ಜಾಮೀನು ಮಂಜೂರಾಗಿದೆ.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ 42 ನೇ ಎಸಿಎಂಎಂ ಕೋರ್ಟ್ ಷರತ್ತು ವಿಧಿಸಿ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಇಬ್ಬರ ಶ್ಯೂರಿಟಿ, 5 ಲಕ್ಷದ ಬಾಂಡ್ ಒದಗಿಸುವಂತೆ ಷರತ್ತು ವಿಧಿಸಿ ಜಾಮೀನು ನೀಡಿದೆ.
ರೇವಣ್ಣಗೆ ಜಾಮೀನು ಮಂಜೂರು ಮಾಡದಂತೆ ಎಸ್ಐಟಿ ಮನವಿ ಮಾಡಿತ್ತು. ಆಕ್ಷೇಪಣೆ ಮಾಡಿದ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆಗೆ ವಿಚಾರಣೆ ಮುಂದೂಡಿಕೆ ಮಾಡಲಾಗಿತ್ತು. ಈ ಕೇಸಲ್ಲಿ ನಾನ್ ಬೇಲೆಬಲ್ ಸೆಕ್ಷನ್ ಇಲ್ಲ. ಕಡ್ಡಾಯವಾಗಿ ಜಾಮೀನು ನೀಡಬೇಕು ಎಂದು ರೇವಣ್ಣ ಪರ ವಕೀಲರ ಮನವಿ ಮಾಡಿದರು. ಆದರೆ, ಎಸ್ಐಟಿ ವಾದಕ್ಕೂ ಅವಕಾಶ ನೀಡೋಣ ಎಂದು ನ್ಯಾಯಾಧೀಶರು ಹೇಳಿದರು.
ಪ್ರಕರಣ ಸಂಬಂಧ ಎಸ್ಪಿಪಿ ಜಯತ್ನಾ ಕೊಠಾರಿ ಆಕ್ಷೇಪಣೆ ಸಲ್ಲಿಸಿದರು. ರೇವಣ್ಣ ಕಸ್ಟಡಿಗೆ ನೀಡಲು ಮನವಿ ಮಾಡಿದರು. ರೇವಣ್ಣ ಪರ ವಕೀಲರ ಕಾಲಾವಕಾಶಕ್ಕೆ ಮನವಿ ಮಾಡಿಕೊಂಡರು.
ಎರಡು ನೋಟಿಸ್ ನೀಡಿದ್ದರೂ ವಿಚಾರಣೆಗೆ ಬಂದಿಲ್ಲ. ವಿಚಾರಣೆಗೆ ಸಹಕಾರ ನೀಡಿಲ್ಲ ಅಂದರೆ ವಶಕ್ಕೆ ಪಡೆಯಲು ಅವಕಾಶ ಇದೆ ಎಂದು ವಾದ ಮಂಡಿಸಿದರು.
ಪ್ರಜ್ವಲ್ ಮೇಲೆ ಕೇಸ್ ದಾಖಲಾಗಿದೆ. ರೇವಣ್ಣ ಪಾತ್ರದಾರರು ಅಲ್ಲ. ಹೀಗಾಗಿ ವಿಚಾರಣೆಗೆ ಹೋಗಿಲ್ಲ ಎಂದು ರೇವಣ್ಣ ಪರ ವಕೀಲ ಅರುಣ್ ವಾದಿಸಿದರು. ಈ ವೇಳೆ ಮಾತನಾಡಿದ ಎಸ್ಪಿಪಿ, ಬೆಳಗ್ಗೆ ಸೆರೆಂಡರ್ ಆಗಲು ಬಂದಿದ್ದಾರೆ. ಹಾಗಾದರೆ ನಾವು ಕಸ್ಟಡಿಗೆ ಪಡೆಯಬಹುದು. ಅದಕ್ಕೆ ನಮಗೆ ಅವಕಾಶ ಇದೆ ಎಂದರು.
ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ರೇವಣ್ಣ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ನಾಳೆ ಮುಖ್ಯ ಅರ್ಜಿ ವಿಚಾರಣೆ ನಡೆಸಲಿದೆ.