ಸಮಾಜಕ್ಕೆ ಮಿಡಿದ ದಿವ್ಯಾಂಗರಾದ ಗುರ್ವಿಂದರ್ಗೆ ಪದ್ಮಶ್ರೀ ಗರಿ
ನವದೆಹಲಿ: ಕೇಂದ್ರ ಸರ್ಕಾರವು 2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಒಟ್ಟು 110 ಜನರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಪೈಕಿ ಕರ್ನಾಟಕದ ಎಂಟು ಸಾಧಕರಿದ್ದಾರೆ. ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಪ್ರೇಮಾ ಧನರಾಜ್, ಅನುಪಮಾ ಹೊಸಕೆರೆ, ಶ್ರೀಧರ್ ಎಂ ಕೃಷ್ಣಮೂರ್ತಿ, ಸಾಮಾಜಿಕ ಸೇವೆಗಾಗಿ ಕೆ ಎಸ್ ರಾಜಣ್ಣ, ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಸಿ ಆರ್ ಚಂದ್ರಶೇಖರ್, ಮೈಸೂರಿನ ಸೋಮಣ್ಣ, ಉದ್ಯಮಿ ಶಶಿ ಸೋನಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಇನ್ನು ಪದ್ಮಶ್ರೀ ಪುರಸ್ಕೃತ ಸಾಧಕರಲ್ಲಿ ಹರಿಯಾಣದ ಗುರ್ವಿಂದರ್ ಸಿಂಗ್ ಅವರು ಕೂಡ ಇದ್ದಾರೆ. ಇವರು ವಿಶೇಷ ಚೇತನರಾದರೂ ದಿವ್ಯಾಂಗರು, ಅಸಹಾಯಕರಿಗೆ ಮಾಡಿದ ಸೇವೆ ಪರಿಗಣಿಸಿ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.
ಹರಿಯಾಣದ ಸಿರ್ಸಾ ಜಿಲ್ಲೆಯವರಾದ 53 ವರ್ಷದ ಗುರ್ವಿಂದರ್ ಸಿಂಗ್ ಅವರು ಕಳೆದ 34 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಗುರ್ವಿಂದರ್ ಸಿಂಗ್ ಅವರು ವಿಶೇಷ ಚೇತನರಾಗಿದ್ದರೂ ಸಮಾಜ ಸೇವೆಯಲ್ಲಿ ತೊಡಗಿ, ಸಾವಿರಾರು ಜನರಿಗೆ ಆಶ್ರಯವಾದ ಕಾರಣ ಇವರಿಗೆ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿ ಘೋಷಿಸಿದೆ.
ಅನಾಥರು, ಹಿರಿಯ ನಾಗರಿಕರು, ಮಹಿಳೆಯರು, ನಿರ್ಗತಿಕರ ಸೇವೆಗಾಗಿ 34 ವರ್ಷ ಮುಡಿಪಾಗಿಟ್ಟಿರುವ ಗುರ್ವಿಂದರ್ ಸಿಂಗ್. ಅನಾಥ ಮಕ್ಕಳ ರಕ್ಷಣೆಗಾಗಿ ಬಾಲ ಗೋಪಾಲ ಧಾಮ ಎಂಬ ಸಂಸ್ಥೆ ಕಟ್ಟಿರುವ ಇವರು ಇದುವರೆಗೆ 300 ಮಕ್ಕಳಿಗೆ ಆಶ್ರಯ ನೀಡಿದ್ದಾರೆ. ಅಪಘಾತಕ್ಕೀಡಾದವರು, ಗರ್ಭಿಣಿಯರು ಸೇರಿ ಸಂಕಷ್ಟದಲ್ಲಿರುವ 6 ಸಾವಿರ ಜನರಿಗೆ ಉಚಿತವಾಗಿ ಆಂಬುಲೆನ್ಸ್ ಸೇವೆ. ದಿವ್ಯಾಂಗ ಜನ್ ಕಿ ಆಶಾ ಎಂಬ ಸಂಸ್ಥೆ ಕಟ್ಟಿರುವ ಇವರು ಸಾವಿರಾರು ಜನರಿಗೆ ಆಶ್ರಯ, ಶಿಕ್ಷಣ ಸೇರಿ ಹಲವು ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ.