ವಿಜಯಕಾಂತ್ ಅಂತಿಮ ದರ್ಶನಕ್ಕೆ ಬಂದ ದಳಪತಿ ಮೇಲೆ ಚಪ್ಪಲಿ ಎಸೆತ
ಚೆನ್ನೈ: ನಟ, ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಸಂಸ್ಥಾಪಕ ವಿಜಯಕಾಂತ್ ಅವರ ಅಂತ್ಯಕ್ರಿಯೆಯಲ್ಲಿ ಗುರುವಾರ (ಡಿ. 28) ಪಾಲ್ಗೊಂಡ ನಟ ದಳಪತಿ ವಿಜಯ್ ಮೇಲೆ ಹಲ್ಲೆ ನಡೆದಿದೆ.
ಚೆನ್ನೈನಲ್ಲಿ ನಡೆದ ವಿಜಯ್ಕಾಂತ್ ಅವರ ಅಂತ್ಯಕ್ರಿಯೆಯಲ್ಲಿ ಹಲವು ತಮಿಳು ಚಲನಚಿತ್ರ ತಾರೆಯರು ಭಾಗವಹಿಸಿದ್ದರು. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವೈರಲ್ ಆಗುತ್ತಿರುವ ವಿಡಿಯೊದಲ್ಲಿ, ವಿಜಯ್ ತಮ್ಮ ಅಂತಿಮ ಗೌರವವನ್ನು ಸಲ್ಲಿಸಲು ಜನಸಮೂಹದ ನಡುವೆ ಹೋಗುತ್ತಿದ್ದರು.
ವಿಜಯಕಾಂತ್ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿ ವಿಜಯ್ ಹೊರಗೆ ಹೋಗುವಾಗ ಜನರ ಗುಂಪು ಅವರನ್ನು ಸುತ್ತುವರಿಯಿತು. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ವಿಜಯ್ ಮೇಲೆ ಚಪ್ಪಲಿ ಎಸೆದಿರುವ ವಿಡಿಯೊದಲ್ಲಿ ಇದೆ. ಯಾವ ಕಾರಣಕ್ಕೆ ಈ ದಾಳಿ ನಡೆದಿದೆ ಎನ್ನುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ವಿಜಯ್ ಅವರಿಗೆ ರಕ್ಷಣೆ ಒದಗಿಸಿದ್ದರೂ ಗುಂಪುನಲ್ಲಿದ್ದ ಹಲವರು ಅವರನ್ನು ಸ್ಪರ್ಶಿಸತೊಡಗಿದ್ದರು. ಅವರು ತಮ್ಮ ಕಾರನ್ನು ಹತ್ತಲು ಪ್ರಯತ್ನಿಸಿದಾಗ ಚಪ್ಪಲಿ ಅವರತ್ತ ಎಸೆಯಲಾಯಿತು. ಹಲವರು ಈ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.