ಸ್ವಂತ ಮಾವನಿಗೆ ಸ್ಕೂಟರ್ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ ಅಳಿಯ
ಬೆಳ್ತಂಗಡಿ: ಕೌಟುಂಬಿಕ ವಿಚಾರದಲ್ಲಿ ದ್ವೇಷದಿಂದ ಸ್ವತಃ ಅಳಿಯನೇ ಮಾವನಿಗೆ ಸ್ಕೂಟರ್ ಡಿಕ್ಕಿ ಹೊಡೆಸಿ ಕೊಲೆಯತ್ನ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದ ಕಂಬಳದಡ್ಡ ಎಂಬಲ್ಲಿ ನಡೆದಿದೆ.
ಮಿತ್ತಬಾಗಿಲು ಗ್ರಾಮದ ಕಂಬಳದಡ್ಡ ನಿವಾಸಿ ಕೆ.ಎಚ್. ಇಬ್ರಾಹಿಂ (60) ಗಾಯಗೊಂಡವರು ಎಂದು ತಿಳಿದು ಬಂದಿದೆ. ಇಬ್ರಾಹಿಂ ಅವರ ಪುತ್ರಿಯ ಗಂಡ ಮುಹಮ್ಮದ್ ಶಾಫಿ ಅಪಘಾತಗೊಳಿಸಿದಾತ ಎಂದು ತಿಳಿದು ಬಂದಿದೆ. ಇಬ್ರಾಹಿಂ ಅವರು ಇದೀಗ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ವಂತ ಅಳಿಯ ಮುಹಮ್ಮದ್ ಶಾಫಿ ಎಂಬವರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ.ಎಚ್. ಇಬ್ರಾಹಿಂ ಅವರ ಮಗಳು ಮತ್ತು ಅಳಿಯನ ಮಧ್ಯೆ ಕೌಟುಂಬಿಕ ಸಮಸ್ಯೆ ಇದ್ದು, ಅಳಿಯ ಖರ್ಚಿಗೆ ಹಣವೂ ನೀಡುತ್ತಿರಲಿಲ್ಲ ಎಂದು ವರದಿಯಾಗಿದೆ. ಈ ಬಗ್ಗೆ ಅವರನ್ನು ಪರಸ್ಪರ ಸರಿ ಮಾಡಲು ತಂದೆ ಪ್ರಯತ್ನ ನಡೆಸುತ್ತಲೇ ಬಂದಿದ್ದರು ಎನ್ನಲಾಗಿದೆ. ಇದೇ ದ್ವೇಷದಿಂದ ಇಬ್ರಾಹಿಂ ಅವರು ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿತ ಅಳಿಯ ಮುಹಮ್ಮದ್ ಶಾಫಿ ದ್ವಿಚಕ್ರ ವಾಹನ ಡಿಕ್ಕಿ ಹೊಡೆಸಿ ಕೊಲೆ ಯತ್ನ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಮಿತ್ತಬಾಗಿಲು ಗ್ರಾಮದ ನಿವಾಸಿ ಮಹಮ್ಮದ್ ರಫೀಕ್ ಎಂಬವರು ಬೆಳ್ತಂಗಡಿ ಠಾಣೆಗೆ ನೀಡಿದ ದೂರಿನಲ್ಲಿ ನ .2 ರಂದು ತನ್ನ ತಂದೆ ಕೆ.ಎಚ್ ಇಬ್ರಾಹಿಂ ಶಾಫಿ (60ವ) ರವರು, ಕಾಜೂರು ಮಸೀದಿಯಲ್ಲಿರುವ ಕಾರ್ಯಕ್ರಮದ ನಿಮಿತ್ತ ಮಕ್ಕಳು, ಹೆಂಗಸರನ್ನು ಅವರ ಅಕ್ಕನ ಮನೆಗೆ ಬಿಡಲು ಹೋಗಿದ್ದರು. ರಾತ್ರಿಯವರೆಗೆ ಮನೆಗೆ ಬಾರದೇ ಇರುವುದರಿಂದ ಈ ಬಗ್ಗೆ ವಿಚಾರಿಸಲು, ಸ್ಕೂಟರಿನಲ್ಲಿ ಕಂಬಳದಡ್ಡ ಎಂಬಲ್ಲಿಗೆ ತಲುಪಿದಾಗ, ಸ್ವಲ್ಪ ದೂರದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಸ್ಕೂಟರೊಂದು ವ್ಯಕ್ತಿಯೊಬ್ಬರಿಗೆ ಡಿಕ್ಕಿಯಾಗಿ ಬೊಬ್ಬೆ ಕೇಳುತ್ತಿತ್ತು.
ಕೂಡಲೇ ಅಲ್ಲಿಗೆ ಹೋಗಿ ನೋಡಿದಾಗ ,ನನ್ನ ತಂದೆ ಡಾಮಾರು ರಸ್ತೆಯಲ್ಲಿ ಬಿದ್ದಿದ್ದು, ನನ್ನ ತಂಗಿಯ ಗಂಡನಾದ ಮಹಮ್ಮದ್ ಶಾಫಿ, ತನ್ನ ತಂದೆಗೆ ಕೈಯಿಂದ ಹೊಡೆಯುತ್ತಿದ್ದು ನನ್ನನ್ನು ನೋಡಿ ಆರೋಪಿಯು ನನ್ನ ಸ್ಕೂಟರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ.