ವಿದ್ಯಾರ್ಥಿಗಳಿಗೆ ಮಿನುಗಲು ಅವಕಾಶ ನೀಡಿದ ಶೂಟಿಂಗ್ ಸ್ಟಾರ್ಸ್ 2024
ಮಂಗಳೂರು: ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ)ದ ಪತ್ರಿಕೋದ್ಯಮ ಮತ್ತು ದೃಶ್ಯ ಸಂವಹನ ವಿಭಾಗ ಜಂಟಿಯಾಗಿ ಆಯೋಜಿಸಿದ ಶೂಟಿಂಗ್ ಸ್ಟಾರ್ಸ್ 2024 ರಾಷ್ಟ್ರಮಟ್ಟದ ಫಿಲ್ಮ್ ಫೆಸ್ಟ್/ವಿಚಾರ ಸಂಕಿರಣ ಕಾರ್ಯಕ್ರಮವು ಇಲ್ಲಿನ ಎಲ್. ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ವೃತ್ತಿಯಲ್ಲಿ ರಿಲಯನ್ಸ್ ರಿಟೇಲ್ ನಲ್ಲಿ ರಾಷ್ಟ್ರೀಯ ವರ್ಗದ ವ್ಯವಸ್ಥಾಪಕನಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಕ್ರಿಯೇಟರ್ ಕೂಡ ಆಗಿರುವ ಧೀರಜ್ ಶೆಟ್ಟಿ ಅಲಿಯಾಸ್ ಧೀರಪ್ಪನ್ ಅತಿಥಿ ಭಾಷಣಕಾರರಾಗಿದ್ದು, ಜೀವನದಲ್ಲಿ ತಾವು ಎದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದರು. ಏನೇ ಆದರೂ ಸೋಲನ್ನು ಒಪ್ಪಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ‘ನನ್ನ ತಂದೆ ನನ್ನ ಸ್ಫೂರ್ತಿಯ ಸೆಲೆ’ ಎನ್ನುತ್ತಾ ತಾವು ಕಂಟೆಂಟ್ ಕ್ರೀಯೇಟರ್ ಆಗಿ ಸೋಲುಗಳ ಮೆಟ್ಟಿಲೇರುತ್ತ ಯಶಸ್ಸಿನ ಕಡೆ ಸಾಗಿದ ಬಗೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಆಲ್ವಿನ್ ಡೇಸಾರವರು, ವರ್ಷಗಳಿಂದ ಶೂಟಿಂಗ್ ಸ್ಟಾರ್ಸ್ ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಬಂದ ಪತ್ರಿಕೋದ್ಯಮ ವಿಭಾಗವನ್ನು ಅಭಿನಂದಿಸುತ್ತ, ಕಲಾವಿದರಿಗೆ ಅದೆಷ್ಟೇ ಸೋಲುಗಳು ಎದುರಾದರೂ ಅದನ್ನು ಹಿಮ್ಮೆಟ್ಟಿ ಮುಂದುವರೆಯಬೇಕು ಎಂದರು.
‘ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸುವುದು ಕಷ್ಟ, ಅದನ್ನು ಅಂತೆಯೇ ಮುನ್ನಡೆಸಿಕೊಂಡು ಹೋಗುವುದು ಇನ್ನೂ ಕಷ್ಟ’ ಎಂದ ಅಡ್ಮಿನ್ ಬ್ಲಾಕ್ ನಿರ್ದೇಶಕ ಡಾ. ಚಾರ್ಲ್ಸ್ ವಿ ಫುರ್ಟಾಡೊ, ಪ್ರಸ್ತುತ ಪ್ರಪಂಚದಲ್ಲಿ ಪತ್ರಿಕೋದ್ಯಮದ ಮಹತ್ವದ ಕುರಿತು ಮಾಹಿತಿ ನೀಡಿದರು.
ʼಡಿ ಕ್ರಿಯೇಷನ್ಸ್ʼನ ಸ್ಕ್ಯಾಮ್ 1770 ತಂಡವು ಶೂಟಿಂಗ್ ಸ್ಟಾರ್ಸ್ 2024 ಉದ್ಘಾಟನಾ ಸಂದರ್ಭದಲ್ಲಿ ಚಿತ್ರದ ಟೀಸರ್, ಹಾಡು ಹಾಗು ಪೋಸ್ಟರ್ ಬಿಡುಗಡೆ ಮಾಡಿದ್ದು, ಈ ಸಂದರ್ಭದಲ್ಲಿ ಚಿತ್ರದ ಮುಖ್ಯ ನಟ ರಂಜನ್ ಎಸ್, ನಟ ರಘು ಶಿವಮೊಗ್ಗ, ನಿರ್ದೇಶಕ ವಿಕಾಸ್ ಪುಷ್ಪಗಿರಿ, ನಟಿ ಹರಿಣಿ, ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ವೇದಿಕೆಯನ್ನು ಅಲಂಕರಿಸಿದರು. ಲಕ್ಷ್ಮಿಯನ್ನು ಕದಿಯಬಹುದು ಸರಸ್ವತಿಯನ್ನು ಅಲ್ಲ ಎಂದ ನಿರ್ದೇಶಕ ವಿಕಾಸ್ ಪುಷ್ಪಗಿರಿ, ಶೈಕ್ಷಣಿಕ ಸಂಸ್ಥೆಗಳಲ್ಲಿನ ಹಗರಣದ ಕುರಿತ ತಮ್ಮ ಚಿತ್ರವನ್ನು ವಿದ್ಯಾರ್ಥಿಗಳು ಪೋಷಕರ ಸಮೇತರಾಗಿ ವಿಕ್ಷಿಸಬೇಕೆಂದು ಮನವಿ ಮಾಡಿದರು.
ವಿದ್ಯಾರ್ಥಿನಿ ಇಯೋಲ ಕಾರ್ಯಕ್ರಮ ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ವಂ.ಫಾ ವಿಲಿಯಂ ಮಾರ್ಸೆಲ್ ರಾಡ್ರಿಗಸ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕ ಅಶ್ವಿನ್ ವಿನೋದ್ ಕುಮಾರ್ ವಂದಿಸಿದರು. ವಂದನಾರ್ಪಣಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದೈಜಿವರ್ಲ್ಡ್ ಪ್ರೈವೇಟ್ ಲಿಮಿಟೆಡ್ ನ ಮಾಲೀಕರಾದ ವಾಲ್ಟರ್ ನಂದಳಿಕೆ ಪತ್ರಿಕೋದ್ಯಮ ತಮ್ಮ ನೆಚ್ಚಿನ ವಿಷಯ ಎನ್ನುತ್ತಾ ಯಾವುದೇ ಸಿದ್ಧಾಂತದ ಪರ ಒಲವನ್ನು ಹೊಂದದೆ ಉತ್ತಮ ಪತ್ರಕರ್ತರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇನ್ನೊಬ್ಬ ಅತಿಥಿಯಾದ ಹಾಸ್ಯ ನಟ ಅರವಿಂದ್ ಬೋಳಾರ್ ಹಾಸ್ಯದ ಅರ್ಥವನ್ನು ತಿಳಿಸುತ್ತಾ, ಒಬ್ಬರೇ ಮಾಡುವುದು ಹಾಸ್ಯವಲ್ಲ. ಅದನ್ನು ನೋಡಿದವರು ನಕ್ಕರೆ ಮಾತ್ರವೇ ಅದು ಹಾಸ್ಯವಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ವಂ.ಫಾ ವಿಲಿಯಂ ಮಾರ್ಸೆಲ್, ಅಡ್ಮಿನ್ ಬ್ಲಾಕ್ ಡೀನ್ ರೋಸ್ ವೀರ ಡಿಸೋಜ, ಪತ್ರಿಕೋದ್ಯಮ ಮತ್ತು ದೃಶ್ಯ ಸಂವಹನ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು, ವಿದ್ಯಾರ್ಥಿ ಸಂಯೋಜಕರು, ಸ್ಪರ್ಧಿಗಳು ಉಪಸ್ಥಿತರಿದ್ದರು.
ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಕಿರು ಚಿತ್ರ ಮತ್ತು ಸಾಕ್ಷ್ಯ ಚಿತ್ರ ಸ್ಪರ್ಧೆ, ಛಾಯಾಗ್ರಹಣ, ಮಾಕ್ ಪ್ರೆಸ್ಸ್, ರೀಲ್, ವರದಿಗಾರಿಕೆ, ಮ್ಯಾಡ್ ಆಡ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿತು. ಇವುಗಳಲ್ಲಿ ಹನ್ನೊಂದು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿವೇಕಾನಂದ ಕಾಲೇಜು ಪುತ್ತೂರು ಓವರ್ ಆಲ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದರು, ಶ್ರೀನಿವಾಸ್ ಕಾಲೇಜು ಎರಡನೆಯ ಸ್ಥಾನ ಪಡೆಯಿತು.